ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಉತ್ತಮ ಬೆಲೆ ಪಡೆಯಿರಿ: ಸಚಿವ ಕಾಗೋಡು
ಆರ್.ಕೆ.ವಿ.ವೈ. ಯೋಜನೆಯಡಿ ಐದು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಲೋಕಾರ್ಪಣೆ
.jpg)
► ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡಲು ಸರಕಾರದಿಂದ ಅನೇಕ ಯೋಜನೆ ಜಾರಿ
► ಮಾರುಕಟ್ಟೆಯ ಅಭಿವೃದ್ಧಿಗೆ 10 ಕೋಟಿ ರೂ. ಬಿಡುಗಡೆಯಾಗುವ ನಿರೀಕ್ಷೆ
► ಆನ್ಲೈನ್ ಮೂಲಕ ಅಡಿಕೆ ಧಾರಣೆ ವ್ಯವಸ್ಥೆ ನಿಗದಿಯಿಂದ ಬೆಳೆಗಾರರಿಗೆ ಅನುಕೂಲ
► ಆದಾಯ ಸಂಗ್ರಹದಲ್ಲಿ ಸಾಗರ ಎಪಿಎಂಸಿ ಮಾರುಕಟ್ಟೆಯು ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿ
ಸಾಗರ, ಡಿ.23: ರೈತರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳ ಮಾರಾಟ ಮಾಡುವ ಮೂಲಕ ಉತ್ತಮ ಬೆಲೆ ಪಡೆಯುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಶುಕ್ರವಾರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಆರ್.ಕೆ.ವಿ.ವೈ. ಯೋಜನೆಯಡಿ ನಿರ್ಮಿಸಿರುವ 5ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಲೋಕಾರ್ಪಣೆಗೊಳಿಸಿ ಹಾಗೂ ಮುಖ್ಯ ಪ್ರಾಂಗಣದ ದ್ವಾರಕ್ಕೆ ಕಮಾನು ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಕೃಷಿಯಿಂದ ರೈತ ಸಮೂಹ ವಿಮುಖವಾಗುತ್ತಿರುವ ಕಾಲಘಟ್ಟ ಇದಾಗಿದೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಜೊತೆಗೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಅದು ಇಂತಹ ಪ್ರಾಂಗಣದ ಮೂಲಕ ರೈತರಿಗೆ ತಲುಪಬೇಕು. ಅಡಿಕೆ ಬೆಳೆಗಾರರು ಸ್ವಲ್ಪಮಟ್ಟಿಗೆ ಮಾರುಕಟ್ಟೆ ಮೂಲಕ ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಆದರೆ ಸಣ್ಣಪುಟ್ಟ ರೈತರು ತಾವು ಬೆಳೆದ ಬೆಳೆಗಳನ್ನು ಮನೆಬಾಗಿಲಿನಲ್ಲಿ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಎಪಿಎಂಸಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಹಿಂದಿನ ಕೃಷಿ ಹಾಗೂ ತೋಟಗಾರಿಕೆ ಸಚಿವ ರಾಗಿದ್ದ ಶ್ಯಾಮನೂರು ಶಿವಶಂಕರಪ್ಪರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಪ್ರಾಂಗಣದ ಅಭಿವೃದ್ದಿಗಾಗಿ ಬೇಡಿಕೆ ಇರಿಸಿದ ತಕ್ಷಣ 5 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಹಣದಲ್ಲಿ 3.47 ಕೋಟಿ ರೂ. ವೆಚ್ಚದಲ್ಲಿ ವಿಶಾಲವಾದ ಹಾಗೂ ಸುಸಜ್ಜಿ ತವಾದ ಗೋದಾಮು ನಿರ್ಮಾಣ ಮಾಡಲಾಗಿದೆ. ಈಗಿನ ಕೃಷಿ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬಳಿಗೆ ಮಾರುಕಟ್ಟೆಯ ಅಭಿವೃದ್ದಿಗೆ 10 ಕೋಟಿ ರೂ. ಅನುದಾನ ಕೇಳಿದ್ದು, ಅದು ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.
ರೈತರು ಆಧುನೀಕರಣಕ್ಕೆ ಒಗ್ಗಿಕೊಳ್ಳಬೇಕು. ಆನ್ಲೈನ್ ಮೂಲಕ ಅಡಿಕೆ ಧಾರಣೆ ವ್ಯವಸ್ಥೆ ನಿಗದಿಪಡಿಸಿರುವುದರಿಂದ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಅತ್ಯಂತ ವಿಶಾಲವಾದ ಜಾಗದಲ್ಲಿ ನಮ್ಮ ಕೃಷಿ ಉತ್ಪನ್ನ ಮಾರುಕಟ್ಟೆ ಇರುವುದರಿಂದ ಈ ಪ್ರದೇಶವನ್ನು ಅತ್ಯಂತ ಸುಂದರವಾಗಿ ರೂಪಿಸುವ ಹೊಣೆಗಾರಿಕೆ ಆಡಳಿತ ಮಂಡಳಿಯ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಕೆ.ಹೊಳೆಯಪ್ಪ, ಸುಮಾರು 55 ಎಕರೆ ಪ್ರದೇಶದಲ್ಲಿ ಪ್ರಾಂಗಣ ನಿರ್ಮಾಣವಾಗಿದ್ದು, ಈ ಜಾಗ ಮಾರುಕಟ್ಟೆಗೆ ಕಲ್ಪಿಸುವಲ್ಲಿ ಸಚಿವರ ಪಾತ್ರ ಪ್ರಮುಖವಾಗಿದೆ. ಆದಾಯ ಸಂಗ್ರಹದಲ್ಲಿ ನಮ್ಮ ಮಾರುಕಟ್ಟೆ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎನ್ನುವುದು ಸಂತೋಷದ ಸಂಗತಿ ಎಂದರು.
ರಾಜ್ಯದಲ್ಲಿ ಅತ್ಯಂತ ದೊಡ್ಡದಾದ 5ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣ ಮಾಡಲಾಗಿದೆ. ಜೊತೆಗೆ ಬೆಳೆಗಾರರಿಗೆ, ರೈತರಿಗೆ ಬೇಕಾದ ಸೌಲಭ್ಯಗಳನ್ನು ಆಡಳಿತ ಮಂಡಳಿ, ಅಧಿಕಾರಿಗಳ ಸಹಭಾಗಿತ್ವದಲ್ಲಿ ನೀಡುತ್ತಾ ಬಂದಿದೆ. ರೈತರು ದಾಸ್ತಾನು ಇಡುವ ಬೆಳೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಸುಮಾರು 2 ಲಕ್ಷ ರೂ.ವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಈ ಸಾಲಿನಲ್ಲಿ ಸುಮಾರು 50 ಲಕ್ಷ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ಬೀಬಿ ಫಸಿಹಾ, ಬಗರ್ಹುಕುಂ ಸಮಿತಿಯ ಅಧ್ಯಕ್ಷ ಬಿ.ಆರ್.ಜಯಂತ್, ರಾಜ್ಯ ಅರೇಕಾ ಛೇಂಬರ್ ಅಧ್ಯಕ್ಷ ಮಧುಕರ ನರಸಿಂಹ ಹೆಗಡೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಬಸವರಾಜಪ್ಪ, ದಲ್ಲಾಲರ ಸಂಘದ ಅಧ್ಯಕ್ಷ ಎಂ.ವಿ.ಮೋಹನ್, ಎಪಿಎಂಸಿ ಮಾಜಿ ಅಧ್ಯಕ್ಷ ಈಳೀ ನಾರಾಯಣಪ್ಪ, ಎಪಿಎಂಸಿ ಉಪಾಧ್ಯಕ್ಷ ಕೇಶವ, ನಿರ್ದೇಶಕರಾದ ವೆಂಕಟೇಶ್ ಗಲ್ಲಿ, ರವಿಕುಮಾರ್, ಚೇತನರಾಜ್, ಓಂಕಾರ್, ಎಂ.ಹುಚ್ಚಪ್ಪ, ಬಿ.ಎಚ್.ಅಣ್ಣಪ್ಪ ಇತರರು ಉಪಸ್ಥಿತರಿದ್ದರು. ಶ್ರೀರಂಜಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾರ್ಯದರ್ಶಿ ಎಂ.ವಿ.ಶೈಲಜಾ ವಂದಿಸಿದರು. ಆಯಿಷಾ ಬಾನು ನಿರೂಪಿಸಿದರು.







