ವಾಮಮಾರ್ಗದಿಂದ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಅಧಿಕಾರಕ್ಕೆ: ಸಂಸದ ಡಾ.ಎಂ.ವೀರಪ್ಪ ಮೊಯ್ಲಿ

ಮೈಸೂರು,ಡಿ.23: ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಬಿಜೆಪಿಯವರು ವಾಮಮಾರ್ಗದಿಂದ ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಜನರನ್ನು ಬ್ಲಾಕ್ ಮೇಲ್ ಮಾಡಿ ಗೆದ್ದಿದ್ದಾರೆ. ಗೆದ್ದ ನಂತರ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಪಾರ್ಲಿಮೆಂಟ್ನ ವ್ಯವಸ್ಥೆಗೆ ಆಘಾತ ತರುವಂತಾಗಿದೆ ಎಂದರು.
ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಬಿಜೆಪಿ ಹೊರಟಿದೆ. ಅದು ನಮ್ಮ ಸಂಸ್ಕೃತಿಯಲ್ಲ್ಲ. ನಾವು ಬೆಳೆದು ಮತ್ತೊಬ್ಬರನ್ನು ಬೆಳೆಸುತ್ತೇವೆ. ಇದು ನಮ್ಮ ಸಂಸ್ಕೃತಿ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಅಂದು ಕಪ್ಪು ಹಣ ಹೊರತರುತ್ತೇನೆ ಎಂದು ಹೇಳಿದ್ದರು. ಎಲ್ಲರ ಬ್ಯಾಂಕ್ ಅಕೌಂಟ್ಗೆ ಅದೇ ಹಣ ಹಾಕುತ್ತೇವೆ ಅಂದರು. ಅದ್ಯಾವುದನ್ನು ಈಡೇರಿಸಲಿಲ್ಲ, ಈ ರೀತಿಯ ಹಲವು ವಿಷಯಗಳನ್ನು ಹೇಳಿದ್ದ ಅವರು ಯಾವುದನ್ನೂ ಈಡೇರಿಸಿಲ್ಲ ಎಂದರು. ಜಿಎಸ್ಟಿಯಿಂದ ಸಾಮಾನ್ಯರಿಗಾಗಲಿ ವ್ಯಾಪಾರಿಗಳಿಗಾಗಲಿ ಅನುಕೂಲ ಆಗಿಲ್ಲ, ಏನಿದ್ದರೂ ಚಾರ್ಟ್ಟೆಡ್ ಅಕೌಂಟೆಂಟ್ಗಳಿಗೆ ಮಾತ್ರ ಅನುಕೂಲವಾಗಿದೆ ಎಂದು ಹೇಳಿದರು.
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿದಂತೆ ಕರ್ನಾಟಕದಲ್ಲಿ ಸಾಧ್ಯವಿಲ್ಲ, ಕರ್ನಾಟಕದ ಜನ ಬಿಜೆಪಿ ಆಡಳಿತವನ್ನು ನೋಡಿ ಬೇಸರ ಪಟ್ಟುಕೊಂಡಿದ್ದಾರೆ. ಕೇಂದ್ರದ ಯೋಜನೆಯಾದ ನರೇಗಾ ಯೋಜನೆಯ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರ ಹಣ ನೀಡಿಲ್ಲ. ಆದ್ದರಿಂದ ನರೇಗಾ ಕೆಲಸಗಳು ನನೆಗುದಿಗೆ ಬಿದ್ದಿವೆ. ಉಚಿತ ಆಹಾರ ವಿತರಣೆ ಕಾರ್ಯಕ್ರಮ ಕೇಂದ್ರ ಸರಕಾರದ್ದಲ್ಲ. ನಮ್ಮ ರಾಜ್ಯ ಸರಕಾರದ ಯೋಜನೆಯಾಗಿದೆ. ರೈತರ ವಿಚಾರವಾಗಿ ಕೇಂದ್ರ ಸರಕಾರ ಒಂದು ಪೈಸೆ ನೀಡಿಲ್ಲ. ಹಾಗೇನಾದರೂ ಕೇಂದ್ರ ಹಣ ನೀಡಿದ್ದರೆ ಗುಟ್ಟಾಗಿ ಯಡಿಯೂರಪ್ಪನವರಿಗೆ ನೀಡಿರಬಹುದು ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ: ಮೈಸೂರು ವಿಭಾಗದ ಐದು ಜಿಲ್ಲೆಗಳ ಸಮಸ್ಯೆ ವಿಚಾರವಾಗಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ವಿಷಯಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆ ಸಿದ್ಧತೆಗೆ ಕಾಂಗ್ರೆಸ್ ತಯಾರಿ ನಡೆಸಿದೆ ಈಗಾಗಲೇ ನಾವು ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಪಾಲಿಸಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಕಳೆದ ಬಾರಿಯ ಅನ್ನಭಾಗ್ಯದಂತಹ ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಅದೇ ರೀತಿ ಅನೇಕ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸಿ ಯಶಸ್ವಿಯಾಗಿದ್ದೇವೆ. ಜಿಡಿಪಿ ಯಲ್ಲಿ ಒಂದನೇ ಸ್ಥಾನ ಸೇರಿದಂತೆ ಬಂಡವಾಳ ಹೂಡಿಕೆಯಲ್ಲಿ ಒಂದನೇ ಸ್ಥಾನದಲ್ಲಿದ್ದೇವೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಉಳಿದಂತೆ ಬಾಕಿ ಇರುವ ಕೆಲಸಗಳಲ್ಲೂ ಒಂದನೇ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಅತ್ಯಂತ ಕಡಿಮೆ ಮಟ್ಟದಲ್ಲಿ ಸಾಲ ಹೊಂದಿದ್ದೇವೆ. ಮುಂದಿನ ಚುನಾವಣೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ. ಮುಂದಿನ ಚುನಾವಣೆ ದೃಷ್ಠಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೂ ತೆರಳಿ ವಿವಿಧ ಸಂಘ ಸಂಸ್ಥೆಗಳು, ಉದ್ಯಮಿಗಳು, ರೈತರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ನಾವು ತಯಾರಿ ನಡೆಸಿ ಬಿಡುಗಡೆ ಮಾಡುವ ಪ್ರಣಾಳಿಕೆಯಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ವಾಸು, ಕೆ.ಸಿ.ಕೊಂಡಯ್ಯ, ಜಿ.ಪಂ.ಸದಸ್ಯೆ ಡಾ.ಪುಷ್ಪಾ ಅಮರನಾ ಥ್ ಮತ್ತಿತರರು ಉಪಸ್ಥಿತರಿದ್ದರು.
ನುಡಿದಂತೆ ನಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ್ಲ ವರ್ಗಗಳನ್ನು ಸಮಾನಾಗಿ ಕಂಡಿದ್ದಾರೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯಲಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ.
-ಡಾ.ಎಂ.ವೀರಪ್ಪಮೊಯ್ಲಿ, ಸಂಸದ







