ಜ.3 ರಂದು ಜೆಡಿಎಸ್ ಪ್ರತಿಭಟನೆ
ವಿಜಯಪುರದಲ್ಲಿ ವಿದ್ಯಾರ್ಥಿನಿ ದಾನಮ್ಮಳ ಅತ್ಯಾಚಾರ, ಕೊಲೆ ಪ್ರಕರಣ

ಮಡಿಕೇರಿ ಡಿ. 25 :ವಿಜಯಪುರದಲ್ಲಿ ವಿದ್ಯಾರ್ಥಿನಿ ದಾನಮ್ಮಳನ್ನು ಅತ್ಯಾಚಾರವೆಸಗಿ ಕೊಲೆಗೈದಿರುವ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿರುವ ಜೆಡಿಎಸ್ ಜಿಲ್ಲಾ ವಕ್ತಾರ ಎಂ.ಎ.ಆದಿಲ್ ಪಾಷ, ಜನವರಿ 3 ರಂದು ಜಾತ್ಯತೀತ ಜನತಾದಳದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ನಡೆಯುತ್ತಿದ್ದರು ರಾಜ್ಯ ಹಾಗೂ ಕೇಂದ್ರ ಸರ್ಕಾರ ಇವುಗಳನ್ನು ನಿಯಂತ್ರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ರಾಜ್ಯ ಮಹಿಳಾ ಆಯೋಗ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದರು.
ವಿಜಯಪುರದ ದಾನೇಶ್ವರಿ ಧಾರುಣವಾಗಿ ಸಾವಿಗೀಡಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರು ವಿಫಲರಾಗಿದ್ದಾರೆ. ತಕ್ಷಣ ನೈಜ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಜನವರಿ 3 ರಂದು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಮತ್ತು ಯಾವುದೇ ವಕೀಲರು ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂದು ಆದಿಲ್ ಪಾಷ ಒತ್ತಾಯಿಸಿದರು. ಅಬ್ದುಲ್ ರೆಹೆಮಾನ್ ಹಾಗೂ ನೌಷಾದ್ ಎಂಬುವವರು ಜಿಲ್ಲಾ ಜೆಎಇಎಸ್ನಲ್ಲಿ ಸ್ಥಾನ ಪಡೆದಿರುವುದಾಗಿ ಜಾಹೀರಾತು ನೀಡಿದ್ದಾರೆ. ಆದರೆ, ಈ ಆಯ್ಕೆಯ ಕುರಿತಾದ ಮಾಹಿತಿ ಸತ್ಯಕ್ಕೆ ದೂರವಾಗಿದ್ದು, ಪಕ್ಷದ ಮುಖಂಡರಾದ ಬಿ.ಎ. ಜೀವಿಜಯ ಹಾಗೂ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ಅವರ ಗಮನಕ್ಕೆ ಬಾರದ ವಿಚಾರ ಇದಾಗಿದೆ. ಅಬ್ದುಲ್ ರೆಹೆಮಾನ್ ಹಾಗೂ ನೌಷಾದ್ ಜೆಡಿಎಸ್ನ ಕಾರ್ಯಕರ್ತರೇ ಅಲ್ಲವೆಂದು ಆದಿಲ್ ಪಾಷ ಸ್ಪಷ್ಟಪಡಿಸಿದರು.
ತಾವು ಹದಿನೈದು ದಿನಗಳ ಹಿಂದೆಯಷ್ಟೆ ಜೆಡಿಎಸ್ನ ಜಿಲ್ಲಾ ವಕ್ತಾರರಾಗಿ ಆಯ್ಕೆಯಾಗಿದ್ದು, ಈ ಹಿಂದೆ ವಕ್ತಾರರಾಗಿದ್ದ ಪಿ.ಎಸ್. ಭರತ್ ಕುಮಾರ್ ಅವರಿಗೆ ರಾಜ್ಯ ಮಟ್ಟದಲ್ಲಿ ಸ್ಥಾನಮಾನ ದೊರಯಲಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಬಿ.ಬಿ. ಬೋಜಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಾಪಣ್ಣ, ಪ್ರಮುಖರಾದ ಚೆನ್ನ ಬಸಪ್ಪ, ಮಡಿಕೇರಿ ನಗರ ಉಪಾಧ್ಯಕ್ಷರಾದ ವಿನೇಶ್ ಕರುಂಬಯ್ಯ ಹಾಗೂ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಎಲ್.ಸಿ. ಬೇಬಿ ಉಪಸ್ಥಿತರಿದ್ದರು.







