ದಾನಮ್ಮ ಕುಟುಂಬಕ್ಕೆ ಎರಡು ಲಕ್ಷ ರೂ.ಪರಿಹಾರ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಡಿ.25: ವಿಜಯಪುರದ ದಲಿತ ಬಾಲಕಿ ದಾನಮ್ಮ ಅತ್ಯಾಚಾರ, ಕೊಲೆ ಪ್ರಕರಣವು ನಾಗರಿಕ ಸಮಾಜವೆ ತಲೆ ತಗ್ಗಿಸುವಂತದ್ದು. ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ನೇಣು ಹಾಕುವ ಕಾನೂನು ದೇಶದ ಹಲವು ರಾಜ್ಯಗಳಲ್ಲಿದೆ. ಗೃಹ ಸಚಿವರು ಈ ವಿಚಾರದಲ್ಲಿ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಸೋಮವಾರ ನಗರದ ಕ್ವೀನ್ಸ್ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ದಾನಮ್ಮ ಕುಟುಂಬಕ್ಕೆ ಕೆಪಿಸಿಸಿ ವತಿಯಿಂದ ಎರಡು ಲಕ್ಷ ರೂ.ಗಳ ಪರಿಹಾರ ನೀಡುತ್ತಿರುವ ವಿಚಾರವನ್ನು ಪ್ರಕಟಿಸಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ದಾನಮ್ಮ ಕುಟುಂಬದ ಸದಸ್ಯರು ಕೆಪಿಸಿಸಿ ಕಚೇರಿಗೆ ಬರಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗಿಲ್ಲ. ಹೀಗಾಗಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಮೂಲಕ ಪರಿಹಾರದ ಚೆಕ್ ಅನ್ನು ತಲುಪಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂವಿಧಾನವನ್ನು ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ. ಜಾತ್ಯತೀತ ತತ್ವದವರಿಗೆ ತಂದೆ ತಾಯಿ ಯಾರು ಅನ್ನೋದೆ ಗೊತ್ತಿಲ್ಲವೆಂದು ಹೇಳಿದ್ದಾರೆ. ಇದು ಅಸಂಸದೀಯ ಪದವಾಗಿದ್ದು, ತಮ್ಮ ಮಾತನ್ನು ಅವರು ಹಿಂತೆಗೆದುಕೊಳ್ಳಬೇಕು. ಜನರ ಕ್ಷಮೆ ಕೋರಬೇಕು ಎಂದು ಪರಮೇಶ್ವರ್ ಆಗ್ರಹಿಸಿದರು.
ದೇಶದ ಸಂವಿಧಾನವು ಪವಿತ್ರವಾದದ್ದು. ಸರ್ವರಿಗೂ ಸಮಪಾಲು, ಸಮಬಾಳು ಅವಕಾಶ ಕಲ್ಪಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಮಿತಿಯು ರಚಿಸಿರುವ ಈ ಸಂವಿಧಾನವನ್ನು ಸುಮ್ಮನೆ ಜಾರಿಗೆ ತಂದಿಲ್ಲ. ಒಂದೊಂದು ಪ್ರಸ್ತಾವನೆ ಬಗ್ಗೆಯೂ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕವಷ್ಟೇ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ಇಂತಹ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುವ ಮೂಲಕ ಕೇಂದ್ರ ಸಚಿವರು ಸಂವಿಧಾನವನ್ನು ರಚಿಸಿದವರಿಗೆ ಅಪಮಾನ ಮಾಡಿದ್ದಾರೆ. ಅಗತ್ಯವಿದ್ದರೆ ಮಾತ್ರ ಸಂವಿಧಾನಕ್ಕೆ ತಿದ್ದುಪಡಿ ತರಬಹುದೆ ಹೊರತು, ಇಡೀ ಸಂವಿಧಾನವೇ ಸರಿಯಲ್ಲ. ಅದನ್ನು ಬದಲಾಯಿಸಬೇಕೆಂದು ಹೇಳಿಕೆ ನೀಡುವುದು ಎಷ್ಟು ಸಮಂಜಸ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಮಹಾದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಇದು ಕಾನೂನಾತ್ಮಕವಾಗುವುದಿಲ್ಲ. ಒಂದು ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆಯುವ ಬದಲು ಮುಖ್ಯಮಂತ್ರಿ ಅಥವಾ ಮುಖ್ಯಕಾರ್ಯದರ್ಶಿಗೆ ಬರೆದು, ಮಾತುಕತೆಗೆ ಆಹ್ವಾನಿಸಬೇಕಿತ್ತು ಎಂದು ಅವರು ಹೇಳಿದರು.
ಆದರೆ, ಒಂದು ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದದ್ದು ಸರಿಯಲ್ಲ. ಅಲ್ಲದೆ, ಆ ಪಕ್ಷದವರು ಅದೇ ಕಾಗದವನ್ನು ಹಿಡಿದುಕೊಂಡು ಉತ್ತರ ಕರ್ನಾಟಕ ಭಾಗದ ಜನರನ್ನು ಮರಳು ಮಾಡುತ್ತಿದ್ದಾರೆ. ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಇದರ ಫಲವನ್ನು ಅವರು ಅನುಭವಿಸಬೇಕಾಗುತ್ತದೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು.
ಗೋವಾ ಕಾಂಗ್ರೆಸ್ನವರು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಮೊದಲು ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟಪಡಿಸಿಲಿ. ಗೋವಾ ಸರಕಾರ ಮೊದಲು ನಮ್ಮ ಸರಕಾರಕ್ಕೆ ಪತ್ರ ಬರೆಯಲಿ. ಆನಂತರ ಕಾಂಗ್ರೆಸ್ ಪಕ್ಷದ ನಾಯಕರ ಜತೆ ಮಾತನಾಡುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಈ ಪ್ರಕ್ರಿಯೆ ನಡೆಯುವ ಮುನ್ನವೆ ನಮ್ಮ ವಿರುದ್ಧ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ಸಂಬಂಧಿಸಿದಂತೆ ತಜ್ಞರು, ವಿದ್ವಾಂಸರು ಚರ್ಚೆ ಮಾಡಬೇಕು. ಧರ್ಮದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ. ಸಚಿವರು ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ. ಅವರು ಸರಕಾರವನ್ನು ಪ್ರತಿನಿಧಿಸುತ್ತಾರೆ. ಪಕ್ಷಕ್ಕೂ ಧರ್ಮದ ವಿಚಾರಕ್ಕೂ ಯಾವುದೆ ಸಂಬಂಧವಿಲ್ಲ ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.
ಸಚಿವರು ಆ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ, ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಅದು ಅವರ ವೈಯಕ್ತಿಕ ವಿಚಾರ. ಅದನ್ನು ಪ್ರಶ್ನೆ ಮಾಡುವ ಅಧಿಕಾರ ನಮಗಿಲ್ಲ. ಸರಕಾರಕ್ಕೆ ಮನವಿ ಮಾಡಿದರೆ, ಅದಕ್ಕೆ ಸ್ಪಂದಿಸಬಹುದು. ಆದರೆ, ಪಕ್ಷಕ್ಕೂ ಇದಕ್ಕೂ ಏನು ಸಂಬಂಧವಿದೆ ಎಂದು ಪರಮೇಶ್ವರ್ ಹೇಳಿದರು.







