ಉಗ್ರರ ಹತ್ಯೆ ‘ಸಾಮೂಹಿಕ ವಿಫಲತೆ’ ಎಂದ ಐಪಿಎಸ್ ಅಧಿಕಾರಿ: ಮಾಹಿತಿ ಕೋರಿದ ಜಮ್ಮುಕಾಶ್ಮೀರ ಸರಕಾರ

ಜಮ್ಮುಕಾಶ್ಮೀರ, ಡಿ. 25: ಇತ್ತೀಚೆಗಿನ ತನ್ನ ಭಾಷಣದಲ್ಲಿ ಕಾಶ್ಮೀರಿ ಉಗ್ರರ ಹತ್ಯೆ ‘ನಮ್ಮ ಸಾಮೂಹಿಕ ವಿಫಲತೆ’ ಎಂದು ಹೇಳಿದ ಯುವ ಐಪಿಎಸ್ ಅಧಿಕಾರಿ ಶೈಲೇಂದ್ರ ಕುಮಾರ್ ಮಿಶ್ರಾ ಅವರಿಂದ ಜಮ್ಮು ಹಾಗೂ ಕಾಶ್ಮೀರ ಸರಕಾರ ವಿವರಣೆ ಕೋರಿದೆ ಎಂದು ಡಿಜಿಪಿ ಎಸ್.ಪಿ. ವೈದ್ ಸೋಮವಾರ ಹೇಳಿದ್ದಾರೆ.
ಭಾರತದ ಮೀಸಲು ಪೊಲೀಸ್ನ ಎರಡನೇ ಬೆಟಾಲಿಯನ್ನ ಕಮಾಂಡೆಂಟ್ ಆಗಿ ನಿಯೋಜಿತರಾಗಿದ್ದ ಹಿರಿಯ ಪೊಲೀಸ್ ಅಧೀಕ್ಷಕ ಶೈಲೇಂದ್ರ ಕುಮಾರ್ ಮಿಶ್ರಾ, 2008ರಲ್ಲಿ ಮುಂಬೈ ದಾಳಿಯ 8ನೇ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನಾ ಪಡೆ ನಡೆಸಿದ ಕಾರ್ಯಾಚರಣೆ ಸಫಲತೆ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಸರಕಾರ ಹಾಗೂ ಗೃಹ ಸಚಿವಾಲಯದಿಂದ ಈ ಬಗ್ಗೆ ವಿವರಣೆ ಕೋರಿ ನಾವು ಪತ್ರ ಸ್ವೀಕರಿಸಿದ್ದೇವೆ ಎಂದು ಡಿಜಿಪಿ ವೈದ್ ಸುದ್ದಿಗಾರರಿಗೆ ಇಂದಿಲ್ಲಿ ತಿಳಿಸಿದರು. ಈ ತಿಂಗಳ ಆರಂಭದಲ್ಲಿ ಮುಂಬೈ ದಾಳಿ ವರ್ಷದ ನೆನಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಣಿವೆಯಲ್ಲಿ ಉಗ್ರರ ಹತ್ಯೆಯ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದರು. ‘‘ದಯವಿಟ್ಟು ಉಗ್ರರ ಹತ್ಯೆಗೆ ಸಂತೋಷ ಪಡಬೇಡಿ. ಈ ಹತ್ಯೆ ನಮ್ಮ ಸೋಲಿನ, ನಮ್ಮ ಸಾಮೂಹಿಕ ವಿಫಲತೆಯ ಸಂಕೇತ’’ ಎಂದು ಅವರು ಹೇಳಿದ್ದರು.
ಜಮ್ಮು ಕಾಶ್ಮೀರದಲ್ಲಿ ಕೆಲವು ಯುವಕರು ನಮ್ಮ ವ್ಯವಸ್ಥೆ, ನಮ್ಮ ಕಾರ್ಯ ವಿಧಾನದ ಬಗ್ಗೆ ದೂರುತ್ತಿದ್ದಾರೆ. ಆದರೆ, ಅವರು ನಮ್ಮ ಮಕ್ಕಳು. ಅವರು ನಮ್ಮದೇ ಜನರು. ಅವರೇ ಮತ್ತೆ ಕೊಲೆಗಡುಕರು, ಸಮಾಜ ವಿರೋಧಿಗಳು ಆಗುತ್ತಾರೆ. ಅವರ ಹತ್ಯೆಯಿಂದ ನಾವು ಸಂತೋಷ ಪಡಬಾರದು’’ ಎಂದು ಅವರು ಹೇಳಿದ್ದಾರೆ.
ಕಣಿವೆಯಾದ್ಯಂತ ಮಿಶ್ರಾ ಅವರು ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ಬಳಿಕ ಮಿಶ್ರಾ, ಇದು ನನ್ನ ವೈಯುಕ್ತಿಕ ನಿಲುವು. ಇದು ನಾನು ಅಧಿಕಾರಿಯಾಗಿ ಗಮನಿಸಿದ್ದು ಎಂದು ಹೇಳಿದ್ದಾರೆ.







