ಜ. 5ರಿಂದ ಸವಣೂರಿನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ
ಪುತ್ತೂರು, ಡಿ. 26: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ ಜನವರಿ 5,6 ಮತ್ತು 7ರಂದು ಪುತ್ತೂರು ತಾಲೂಕಿನ ಸವಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮತ್ತು ಪುತ್ತೂರು ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದ.ಕ. ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಸವಣೂರು ಗ್ರಾಮ ಪಂಚಾಯಿತಿ, ದ.ಕ. ಜಿಲ್ಲಾ ಯುವಜನ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವಜನ ಮೇಳ ನಡೆಯಲಿದೆ. ಸವಣೂರು ಯುವಕ ಮಂಡಲ ಮತ್ತು ತಾಲೂಕಿನ ಎಲ್ಲ ಯುವಕ ಮಂಡಲ, ಯುವತಿ ಮಂಡಲಗಳು ಸಹಯೋಗದಲ್ಲಿ 3 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು 2500 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಯುವಕ ಮತ್ತು ಯುವತಿಯರಿಗೆ 12 ಸ್ಪರ್ಧೆಗಳು ಪ್ರತ್ಯೇಕವಾಗಿ ನಡೆಯಲಿದೆ. ಎರಡು ಸ್ಪರ್ಧೆಗಳು ಕೇವಲ ಯುವತಿಯರಿಗೆ ಮಾತ್ರ ನಡೆಯಲಿದೆ. ಆರು ವಿಭಾಗದ ಸ್ಪರ್ಧೆಗಳು ಕೇವಲ ಪುರುಷರಿಗೆ ಮಾತ್ರ ನಡೆಯಲಿವೆ.
ಈ ಬಾರಿ ತಾಲೂಕು ಮಟ್ಟದ ಸ್ಪರ್ಧೆಗಳನ್ನು ನಡೆಸದೆ ನೇರವಾಗಿ ಜಿಲ್ಲಾ ಮಟ್ಟದ ಸ್ಪರ್ಧೆ ಮಾಡುತ್ತಿರುವ ಕಾರಣ ತಾಲೂಕು ಮಟ್ಟದಿಂದ ಆಯ್ಕೆಯಾಗಿ ಬರುವ ಪ್ರಮೇಯವಿಲ್ಲ. ಪ್ರತೀ ಯುವಕ, ಯುವತಿ ಮಂಡಲಗಳಿಂದ ಸ್ಪರ್ಧಾಳುಗಳು ನೇರವಾಗಿ ಜಿಲ್ಲಾ ಮಟ್ಟಕ್ಕೆ ಬರಲಿದ್ದಾರೆ. ಇಲ್ಲಿ ಆಯ್ಕೆಯಾದವರು ವಿಭಾಗ ಮಟ್ಟದ ಬದಲು ನೇರವಾಗಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಮಟ್ಟದ ಯುವಜನ ಮೇಳ ಸಂಘಟಿಸಲು ಸ್ಥಳೀಯ ಸಮಿತಿಗೆ ಎರಡೂವರೆ ಲಕ್ಷ ರೂ.ಗಳ ಅನುದಾನವನ್ನು ಸರಕಾರ ನೀಡುತ್ತದೆ. ಇದಲ್ಲದೆ ಪ್ರಸ್ತುತ 3 ವರ್ಷಗಳಿಂದ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತಿದ್ದು, ಇದಕ್ಕೆ ಎರಡೂಕಾಲು ಲಕ್ಷ ರೂ. ಸರಕಾರ ನೀಡುತ್ತದೆ. ಸ್ಪರ್ಧಾಳುಗಳ ಪ್ರಯಾಣ ಭತ್ಯೆಯನ್ನೂ ನೀಡುತ್ತದೆ. ಇಷ್ಟಾದರೂ ಖರ್ಚು ಹೆಚ್ಚಾಗುತ್ತಿದ್ದು, ಮಿಕ್ಕಿದ ಮೊತ್ತವನ್ನು ದಾನಿಗಳ ನೆರವಿನಿಂದ ಭರಿಸಲಾಗುತ್ತದೆ.
ಜನವರಿ ಐದರಂದು ಸಂಜೆ 5.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರು, ಜಿಲ್ಲೆಯ ಶಾಸಕರುಗಳು, ಜಿಪಂ ಅಧ್ಯಕ್ಷರು, ಸಂಸದರು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ತುಳುಗೀತೆ, ಗೀಗೀಪದ, ಜಾನಪದ ಗೀತೆ, ಜಾನಪದ ನೃತ್ಯ, ಕೋಲಾಟ, ಭಜನೆ, ತುಳು ಪಾಡ್ದನ ಮತ್ತು ತುಳು ಪ್ರಾದೇಶಿಕ ನೃತ್ಯ ಎಂಬ 12 ವಿಭಾಗಗಳು ಯುವಕ, ಯುವತಿಯರಿಗಿದೆ. ರಾಗಿ ಬೀಸುವ ಪದ ಮತ್ತು ಶೋಬಾನೆ ಪದ ಕೇವಲ ಯುವತಿಯರಿಗೆ ಮಾತ್ರ ಇರಲಿದೆ. ವೀರಗಾಸೆ, ಡೊಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಯಕ್ಷಗಾನ ಮತ್ತು ಚರ್ಮವಾದ್ಯ ಮೇಳ ಇವುಗಳು ಕೇವಲ ಪುರುಷರಿಗೆ ಮಾತ್ರ ಇದೆ. ಭಾಗವಹಿಸುವ ತಂಡಗಳು ಜನವರಿ 5ರಂದು ಸಂಜೆ ನಾಲ್ಕು ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರಂಬಾರು, ಸವಣೂರು ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಉಪಸ್ಥಿತರಿದ್ದರು.







