ಮಹಾಕಾಲ ದೇವಾಲಯಕ್ಕೆ ಭೇಟಿ ನೀಡಿದಾಗ ನನ್ನ ಅಂಗವಿಕಲತೆಯನ್ನು ಲೇವಡಿ ಮಾಡಿದರು
ಎವರೆಸ್ಟ್ ಏರಿದ ಸಾಧಕಿ ಅರುಣಿಮಾ ಆರೋಪ

ಉಜ್ಜೈನಿ, ಡಿ. 26: “ಎವರೆಸ್ಟ್ ಹತ್ತುವಾಗ ಅನುಭವಿಸಿದ ನೋವಿಗಿಂತೆ ಹೆಚ್ಚು ನೋವನ್ನು ಮಹಾಕಾಲ ದೇವಾಲಯಕ್ಕೆ ಭೇಟಿ ನೀಡಿದಾಗ ನಾನು ಅನುಭವಿಸಿದೆ” ಎಂದು ರಾಷ್ಟ್ರ ಮಟ್ಟದ ಮಾಜಿ ವಾಲಿಬಾಲ್ ಆಟಗಾರ್ತಿ ಹಾಗೂ ಎವರೆಸ್ಟ್ ಹತ್ತಿದ ಮೊದಲ ಅಂಗವಿಕಲೆ ಅರುಣಿಮಾ ಸಿನ್ಹಾ ಸೋಮವಾರ ಹೇಳಿದ್ದಾರೆ.
“ನನಗೆ ಇದನ್ನು ಹೇಳಲು ವಿಷಾದವಾಗುತ್ತದೆ. ಎವರೆಸ್ಟ್ ಹತ್ತುವಾಗಿನ ನೋವಿಗಿಂತ ಹೆಚ್ಚಿನ ನೋವನ್ನು ನಾನು ಮಹಾಕಾಲ ದೇವಾಲಯ (ಉಜ್ಜೈನಿ)ಕ್ಕೆ ಭೇಟಿ ನೀಡಿದಾಗ ಅನುಭವಿಸಿದೆ. ನನ್ನ ಅಂಗವೈಕಲ್ಯವನ್ನು ಅಲ್ಲಿ ಲೇವಡಿ ಮಾಡಲಾಯಿತು” ಎಂದು ಅವರು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ ಹಾಗೂ ಆ ಟ್ವಿಟ್ಟರ್ ಅನ್ನು ಪ್ರಧಾನಿ ಮಂತ್ರಿ ಅವರ ಕಚೇರಿ ಹಾಗೂ ಮುಖ್ಯಮಂತ್ರಿ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.
ರವಿವಾರ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಪ್ರಯತ್ನಿಸಿದ ಅರುಣಿಮಾ ಸಿನ್ಹಾ ಅವರನ್ನು ಭದ್ರತಾ ಅಧಿಕಾರಿಗಳು ಎರಡು ಬಾರಿ ತಡೆದಿದ್ದರು. ಅರುಣಿಮಾ ಸಿನ್ಹಾ ಅವರೊಂದಿಗೆ ವಾದಿಸಿ ಅತ್ತಿದ್ದರು ಎಂದು ದೇವಾಲಯದ ಮೂಲಗಳು ತಿಳಿಸಿವೆ.
“ಮಾಧ್ಯಮದ ವರದಿಯಿಂದ ನಾನು ಈ ವಿಷಯ ತಿಳಿದೆ. ಅರುಣಿಮಾ ಪೊಲೀಸ್ ಠಾಣೆಯಲ್ಲಿ ಅಥವಾ ದೇವಾಲಯದ ಆಡಳಿತ ಮಂಡಳಿಯಲ್ಲಿ ಯಾವುದೇ ದೂರು ದಾಖಲಿಸಿಲ್ಲ” ಎಂದು ಮಹಾಕಾಲ ದೇವಾಲಯ ಆಡಳಿತಾಧಿಕಾರಿ ಅವಧೇಶ್ ಶರ್ಮಾ ತಿಳಿಸಿದ್ದಾರೆ.





