ಕಲ್ಲಡ್ಕ: ಖಾಸಗಿ ಬಸ್ಗೆ ಕಲ್ಲು ತೂರಾಟ
ಅಂಗಡಿ ಮುಂಗಟ್ಟು ಬಂದ್, ಬಿಗಿ ಪೊಲೀಸ್ ಬಂದೋಬಸ್ತ್
ಮಂಗಳೂರು, ಡಿ.26: ವ್ಯಕ್ತಿಯೊಬ್ಬರಿಗೆ ಚೂರಿ ಇರಿತದ ಘಟನೆಯ ಬಳಿಕ ಕಲ್ಲಡ್ಕ ಕೆಳಗಿನ ಪೇಟೆಯಲ್ಲಿ ಖಾಸಗಿ ಬಸ್ಗೆ ದುಷ್ಕರ್ಮಿಗಳ ತಂಡವೊಂದು ಕಲ್ಲು ತೂರಾಟ ನಡೆಸಿದೆ ಎನ್ನಲಾಗಿದೆ.
ಕಲ್ಲಡ್ಕ ಕೆಳಗಿನ ಪೇಟೆಯಲ್ಲಿರುವ ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಮನೆಯ ಎದುರು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಲ್ಲು ತೂರಾಟದಿಂದ ಬಸ್ನ ಗಾಜಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಅಂಗಡಿ ಮುಂಗಟ್ಟು ಬಂದ್: ಕೇಶವ ಎಂಬವರಿಗೆ ಚೂರಿ ಇರಿತದ ಘಟನೆಯ ಬಳಿಕ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರಿಂದ ಕಲ್ಲಡ್ಕದ ಮೇಲಿನ ಹಾಗೂ ಕೆಳಗಿನ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮಾಲಕರು ಸ್ವಯಂ ಆಗಿ ಬಂದ್ ಮಾಡಿ ಮನೆಗೆ ತೆರಳಿದ್ದಾರೆ. ಕೆಲವು ತಿಂಗಳ ಹಿಂದೆ ಕೋಮು ಗಲಭೆಯಿಂದ ತತ್ತರಿಸಿ ಹೋಗಿದ್ದ ಕಲ್ಲಡ್ಕದಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಾಣವಾಗಿರುವುದರಿಂದ ಕಲ್ಲಡ್ಕದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದೆ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.