ಮಂಗಳೂರು: ತಂಡದಿಂದ ರಿಕ್ಷಾ ಚಾಲಕನ ಕೊಲೆಯತ್ನ; ದೂರು

ಮಂಗಳೂರು, ಡಿ.27: ರಾ.ಹೆ. 66ರ ಜಪ್ಪಿನಮೊಗರು ಸಮೀಪ ರಿಕ್ಷಾ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಕೊಲೆಗೈಯಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಉಳ್ಳಾಲ ಅಳೇಕಲ ನಿವಾಸಿ ಮುಹಮ್ಮದ್ ಶಾಕಿರ್ (35) ತಲವಾರು ದಾಳಿಗೊಳಗಾದ ರಿಕ್ಷಾ ಚಾಲಕ ಎಂದು ಗುರುತಿಸಲಾಗಿದೆ. ಅವರು ಮಂಗಳವಾರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಬಿ.ಸಿ.ರೋಡ್ನಿಂದ ಪಂಪ್ವೆಲ್ ಮೂಲಕ ಉಳ್ಳಾಲದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದಾಗ ಕಾರೊಂದರಲ್ಲಿ ಹಿಂಬಾಲಿಸಿಕೊಂಡು ಬಂದ ತಂಡವೊಂದು ತಲವಾರು ದಾಳಿಗೈದಿದೆ. ಇದರಿಂದ ರಿಕ್ಷಾ ಚಾಲಕ ಮುಹಮ್ಮದ್ ಶಾಕಿರ್ರ ಮುಖ ಮತ್ತು ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಇದೀಗ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಹಮ್ಮದ್ ಶಾಕಿರ್ ಮಂಗಳೂರಿನಲ್ಲಿ ರಿಕ್ಷಾವನ್ನು ಬಾಡಿಗೆಗೆ ಓಡಿಸುತ್ತಿದ್ದು, ಮಂಗಳವಾರ ರಾತ್ರಿ ಬಿ.ಸಿ.ರೋಡ್ಗೆ ಬಾಡಿಗೆಗೆ ಹೋಗಿದ್ದ ಅವರು ಮರಳಿ ಬರುವಾಗ ಈ ಕೃತ್ಯ ಸಂಭವಿಸಿದೆ. ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ವೇಳೆ ಜಲೀಲ್ ಕರೋಪಾಡಿ ಹತ್ಯೆ ಆರೋಪಿಯೊಬ್ಬನಿಗೆ ಚೂರಿ ಇರಿತದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮುಹಮ್ಮದ್ ಶಾಕಿರ್ ಮನೆಗೆ ಸರಿಸುಮಾರು 9 ಅಥವಾ 10 ಗಂಟೆಗೆ ಸೇರುತ್ತಾರೆ. ನಿನ್ನೆ ಬಿ.ಸಿ.ರೋಡ್ಗೆ ಬಾಡಿಗೆಗೆ ತೆರಳಿದ್ದ ಕಾರಣ ಮನೆಗೆ ಮರಳುವಾಗ ತಡವಾಗಿತ್ತು. ಇವರು ಚಲಾಯಿಸುತ್ತಿದ್ದ ರಿಕ್ಷಾವನ್ನು ಜಪ್ಪಿನಮೊಗರು ಬಳಿ ಓವರ್ಟೇಕ್ ಮಾಡಿದ ಕಾರೊಂದು ಏಕಾಎಕಿ ಅವರ ಮೇಲೆ ತಲವಾರು ಬೀಸಿದ್ದು, ಪರಿಣಾಮ ಶಾಕಿರ್ರ ತುಟಿ ಮತ್ತು ಬಲಗಣ್ಣಿಗೆ ಗಾಯವಾಗಿದೆ. ಪ್ರಾಣ ಭಯದಿಂದ ತಕ್ಷಣ ಅವರು ರಿಕ್ಷಾವನ್ನು ಎಕ್ಕೂರು ಕಡೆಗೆ ಚಲಾಯಿಸಿಕೊಂಡು ಹಿಂದಿರುಗಿದ್ದಾರೆ. ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದುದನ್ನು ಖಚಿತಪಡಿಸಿಕೊಂಡ ಬಳಿಕ ಮರಳಿ ತೊಕ್ಕೊಟ್ಟಿಗೆ ತೆರಳಿ ಖಾಸಗಿ ಆಸ್ಪತ್ರೆಗೆ ದಾಖಲಾದರು. ನಂತರ ಮನೆಯವರಿಗೆ ವಿಷಯ ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅಪಾಯದಿಂದ ಪಾರಾಗಿದ್ದರೂ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ’ ಎಂದು ಶಾಕಿರ್ರ ನಿಕಟವರ್ತಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಕೃತ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







