ಹಿರಿಯಡಕ: ದೇವಳದಲ್ಲಿ ನಿಧಿಕುಂಭ ಸ್ಥಾಪನೆ

ಹಿರಿಯಡ್ಕ, ಡಿ.27: ಇಲ್ಲಿನ ಶ್ರೀವೀರಭದ್ರ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರದ ದ್ವಿತೀಯ ಹಂತದ ಅಂಗವಾಗಿ ಶ್ರೀಬ್ರಹ್ಮಲಿಂಗೇಶ್ವರ ದೇವರ ಗರ್ಭಗೃಹಕ್ಕೆ ಇಂದು ಬೆಳಗ್ಗೆ 9:50ಕ್ಕೆ ಸರಿಯಾಗಿ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನಿಧಿಕುಂಭ ಸ್ಥಾಪನೆ ನಡೆಯಿತು.
ಬುಧವಾರ ಬೆಳಗ್ಗೆ ಎಂಟು ಗಂಟೆಯಿಂದಲೇ ಸಹಸ್ರಾರು ಭಕ್ತರು ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಶ್ರೀಬ್ರಹ್ಮಲಿಂಗೇಶ್ವರ ಗರ್ಭಗುಡಿಯ ನಿಧಿಕುಂಭ ಸ್ಥಾಪನೆಗೆ ಅಭೂತಪೂರ್ವ ರೂಪದಲ್ಲಿ ಚಿನ್ನ, ಬೆಳ್ಳಿ ನಾಣ್ಯಗಳನ್ನು, ಮುತ್ತು ರತ್ನಗಳನ್ನೊಳಗೊಂಡ ನವರತ್ನಗಳನ್ನು ಸಮರ್ಪಿಸಿದರು.
ಹಿರಿಯಡಕ ದೇವಳ ಸುಮಾರು 800 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದ್ದು, ಇದರ ಗರ್ಭಗುಡಿಯ ನಿಧಿಕುಂಭ ಸ್ಥಾಪನೆಯ ಧಾರ್ಮಿಕ ವಿಧಿವಿಧಾನಗಳು ಲಕ್ಷ್ಮಿನಾರಾಯಣ ತಂತ್ರಿ ಹಾಗೂ ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಿನಯ ಕುಮಾರ ಸೊರಕೆ, ಕಾರ್ಯಾಧ್ಯಕ್ಷ ಮಾಂಬೆಟ್ಟು ಗೋವರ್ಧನ ಹೆಗ್ಡೆ, ಅಧ್ಯಕ್ಷ ರಾದ ಅಂಜಾರುಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ಡಾಂಬೀಡು ಹರ್ಷವರ್ಧನ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಅಂಜಾರು ಬೀಡು ಅಮರನಾಥ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.







