ಡಿಜಿಟಲ್ ಕರೆನ್ಸಿ ಹೂಡಿಕೆಗಳು ನಕಲಿ ಯೋಜನೆಗಳಿದ್ದಂತೆ: ವಿತ್ತ ಸಚಿವಾಲಯ
ಬಿಟ್ಕಾಯಿನ್ಸ್ ಬಗ್ಗೆ ಹೂಡಿಕೆದಾರರನ್ನು ಎಚ್ಚರಿಸಿದ ಸರಕಾರ

ಹೊಸದಿಲ್ಲಿ, ಡಿ.29: ಬಿಟ್ಕಾಯಿನ್ನಂಥ ಕ್ರಿಪ್ಟೊಪರೆನ್ಸಿಗಳಲ್ಲಿ ವ್ಯವಹಾರ ನಡೆಸುವುದರಲ್ಲಿ ಇರುವ ಅಪಾಯದ ಕುರಿತು ಹೂಡಿಕೆದಾರರನ್ನು ಶುಕ್ರವಾರ ಎಚ್ಚರಿಸಿರುವ ವಿತ್ತ ಸಚಿವಾಲಯ ಡಿಜಿಟಲ್ ಕರೆನ್ಸಿ ಹೂಡಿಕೆಗಳು ನಕಲಿ ಯೋಜನೆಗಳಿದ್ದಂತೆ ಎಂದು ತಿಳಿಸಿದೆ.
ಕ್ರಿಪ್ಟೊಕರೆನ್ಸಿಗಳು ಕಾನೂನುಬದ್ಧ ಹಣವಲ್ಲ ಮತ್ತು ನಮ್ಮ ದೇಶದಲ್ಲಿ ಅದಕ್ಕೆ ಯಾವುದೇ ರೀತಿಯ ನಿಯಂತ್ರಣ ಅಥವಾ ರಕ್ಷಣೆಯಿಲ್ಲ ಎಂದು ವಿತ್ತ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈ ಕರೆನ್ಸಿಯ ಮೇಲೆ ಯಾವುದೇ ರೀತಿಯ ನಿಷೇಧ ಅಥವಾ ತಡೆಯನ್ನು ಹಾಕುವ ಬಗ್ಗೆ ಸಚಿವಾಲಯ ಪ್ರಸ್ತಾಪ ಮಾಡಿಲ್ಲ. ಇಂಥ ಡಿಜಿಟಲ್ ಕರೆನ್ಸಿಯಲ್ಲಿ ವ್ಯವಹಾರ ನಡೆಸುವ ಹೂಡಿಕೆದಾರರು ಮತ್ತು ಇತರ ವ್ಯಕ್ತಿಗಳು ತಮ್ಮ ಸ್ವಂತ ಜವಾಬ್ದಾರಿಯಲ್ಲಿ ವ್ಯವಹಾರ ನಡೆಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಕಲಿ ಹೂಡಿಕೆ ಯೋಜನೆಗಳಲ್ಲಿ ಅಸಹಜವೆನ್ನಬಹುದಾದಷ್ಟು ಹೆಚ್ಚಿನ ಮೊತ್ತದ ಹಣ ಹಿಂಪಡೆಯುವಿಕೆಯ ಭರವಸೆ ನೀಡಲಾಗುತ್ತದೆ. ಇವುಗಳಲ್ಲಿ ಆರಂಭದ ಹೂಡಿಕೆದಾರರಿಗೆ ನಂತರ ಬಂದ ಹೂಡಿಕೆದಾರರ ಹಣವನ್ನು ಪಾವತಿಸಲಾಗುತ್ತದೆ. ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಲಾಗುವ ಹಣವನ್ನು ಭಯೋತ್ಪಾದಕ ಕೃತ್ಯಗಳಿಗೆ, ಕಳ್ಳಸಾಗಾಟಗಳಿಗೆ, ಮಾದಕದ್ರವ್ಯ ಸಾಗಾಟಕ್ಕೆ ಮತ್ತು ಇತರ ಹಣ ವಂಚನಾ ಕೃತ್ಯಗಳಿಗೆ ಬಳಸಲಾಗುವ ಸಾಧ್ಯತೆಗಳಿವೆ ಎಂದು ಸಚಿವಾಲಯವು ಎಚ್ಚರಿಸಿದೆ.
ಸದ್ಯ ಭಾರತದಲ್ಲಿ ಕ್ರಿಪ್ಟೊಕರೆನ್ಸಿ ಮೇಲೆ ಯಾವುದೇ ನಿಯಂತ್ರಣವಿಲ್ಲ ಮತ್ತು ಇತರ ದೇಶಗಳಂತೆ ಭಾರತ ಕೂಡಾ ಈ ಕರೆನ್ಸಿ ಮಾರುಕಟ್ಟೆಯನ್ನು ಯಾವ ರೀತಿ ನಿಯಂತ್ರಿಸಬಹುದು ಎಂಬ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದೆ. ಸಾವಿರಾರು ಜನರು ಕ್ರಿಪ್ಟೊಕರೆನ್ಸಿಯಲ್ಲಿ ಹಣವನ್ನು ಕಳೆದುಕೊಳ್ಳುವಾಗ ಕೇವಲ ಸಲಹಾಮಂಡಳಿಯ ರಚನೆಯಿಂದ ಪ್ರಯೋಜನವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯದ ವಕೀಲರು ಮತ್ತು ಸೈಬರ್ ತಜ್ಞರಾದ ಪವನ್ ದುಗ್ಗಲ್ ಅಭಿಪ್ರಾಯಿಸುತ್ತಾರೆ.
ಬಿಟ್ಕಾಯಿನ್ ಜಗತ್ತಿನ ಅತೀದೊಡ್ಡ ಮತ್ತು ಪ್ರಸಿದ್ಧ ಕ್ರಿಪ್ಟೊಕರೆನ್ಸಿಯಾಗಿದೆ. ಈ ಕರೆನ್ಸಿಯು ಈ ವರ್ಷ ತನ್ನ ಮೌಲ್ಯವನ್ನು ಹತ್ತೊಂಬತ್ತು ಪಟ್ಟು ಹೆಚ್ಚು ವೃದ್ಧಿಸಿಕೊಂಡಿದೆ. ಏಷ್ಯಾದ್ಯಂತ ಡಿಜಿಟಲ್ ಕರೆನ್ಸಿ ಅತ್ಯಂತ ಜನಪ್ರಿಯವಾಗಿದ್ದು ಜಪಾನ್ ಮತ್ತು ದಕ್ಷಿಣ ಕೊರಿಯಾ ಮುಂತಾದ ದೇಶಗಳಲ್ಲಿ ಜನರು ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡಿ ಕ್ರಿಪ್ಟೊಕರೆನ್ಸಿ ಹೂಡಿಕೆಯನ್ನೇ ಮುಖ್ಯ ಉದ್ಯೋಗವನ್ನಾಗಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಡಿಜಿಟಲ್ ಕರೆನ್ಸಿಯಲ್ಲಿ ವ್ಯವಹಾರ ನಡೆಸುತ್ತಿರುವ ಒಟ್ಟಾರೆ ಜನರ ಪೈಕಿ ಅರ್ಧದಷ್ಟು ಮಂದಿ ಈ ಎರಡು ದೇಶಗಳಿಗೆ ಸೇರಿದವರಾಗಿದ್ದಾರೆ.
ತನ್ನ ದೇಶದೊಳಗೆ ಕ್ರಿಪ್ಟೊಕರೆನ್ಸಿ ವ್ಯವಹಾರದ ಮೇಲೆ ನಿಯಂತ್ರಣ ಹೇರಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಗುರುವಾರದಂದು ದಕ್ಷಿಣ ಕೊರಿಯಾ ಸರಕಾರ ತಿಳಿಸಿದೆ.







