ನಾರಾಯಣ ಗುರುಗಳು ಸಮಾಜಕ್ಕಾಗಿ ಬದುಕಿದವರು: ದಿನೇಶ್ ಅಮೀನ್ ಮಟ್ಟು
ಮೆಲ್ಕಾರ್ ಬಿರ್ವ ಸೆಂಟರ್ನಲ್ಲಿ 'ನಾರಾಯಣಗುರು ಚಿಂತನೆ-ಸಂಘಟನೆ' ಕಾರ್ಯಗಾರ
.jpg)
ಬಂಟ್ವಾಳ, ಡಿ. 29: ನಾರಾಯಣ ಗುರುಗಳು ಸಮಾಜಕ್ಕಾಗಿ ಬದುಕಿದವರು. ಸಮಾಜದ ಎಲ್ಲ ಬಗೆಯ ಸಮಸ್ಯೆಗಳಿಗೆ ಶಿಕ್ಷಣವು ಚಿಕಿತ್ಸೆಯಾಗುತ್ತೆ ಎಂಬ ನಂಬಿಕೆ ಅವರಲ್ಲಿತ್ತು. ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದು ಅವರು ಕರೆನೀಡಿದ್ದಾರೆ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟದ್ದಾರೆ.
ಬಂಟ್ವಾಳದ ಮೆಲ್ಕಾರ್ ಬಿರ್ವ ಸೆಂಟರ್ನಲ್ಲಿ ಯುವವಾಹಿನಿ ಕೇಂದ್ರ ಸಮಿತಿ, ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ "ಅನ್ವೇಷಣಾ -2017" ರಾಷ್ಟ್ರೀಯ ಕಾರ್ಯಾಗಾರದಲ್ಲಿ "ನಾರಾಯಣಗುರು ಚಿಂತನೆ ಮತ್ತು ಸಂಘಟನೆ" ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾರಾಯಣಗುರು ಓರ್ವದಾರ್ಶನಿಕ. ವಿದ್ಯೆಯು ಸತ್ಯ, ನ್ಯಾಯದ ಹುಡುಕಾಟ. ಮಾತ್ರವಲ್ಲ ವೈಜ್ಞಾನಿಕ, ವೈಚಾರಿಕ ಚಿಂತನೆಗಳಿಂದ ವ್ಯಕ್ತಿಯು ಬೌದ್ಧಿಕ ದಾಸ್ಯದಿಂದ ಬಿಡುಗಡೆಯಾಗಬೇಕು ಎಂದು ನಾರಾಯಣಗುರು ಚಳವಳಿಗಳನ್ನು ರೂಪಿಸಿದರು ಎಂದರು.
ಮನುಷ್ಯ ಪರಿಸರದ ಕೂಸು. ಪ್ರತಿಭೆಗೆ ಯಾವುದೇ ಜಾತಿಯ ಹಂಗಿಲ್ಲ. ನಮ್ಮೊಳಗಿನ ಕೀಳರಿಮೆಯನ್ನು ಮೊದಲು ಕಸದ ಬುಟ್ಟಿಗೆ ಹಾಕಿ. ನಂತರ ಸಾಧನೆಯ ಗುರಿಯ ಕಡೆಗೆ ಹೆಚ್ಚಿನ ಗಮನಹರಿಸಿ ಎಂದ ಅವರು, ಆತ್ಮ ವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದು ಇಲ್ಲ. ಚರಿತ್ರೆಯನ್ನು ಅಧ್ಯಯನ ಮಾಡಿದರೆ ನಮಗೆ ಗೊತ್ತಾಗುತ್ತೆ, ಯಾರು ಕೂಡ ಒಮ್ಮೆಲೆ ನಾಯಕರಾಗಿ ರೂಪುಗೊಳ್ಳೊದಿಲ್ಲ ಎಂದು. ಯಾವುದಾದರೊಂದು ಹೋರಾಟದ ಕಾರಣವಾಗಿ ನಾಯಕರಾಗಿ ರೂಪುಗೊಳ್ಳುತ್ತಾರೆ ಎಂದರು.
ಇಂದಿನ ಹೊಸ ತಲೆಮಾರು ಅನುಕೂಲ ಮತ್ತು ಅನಾನುಕೂಲ ಎರಡರ ಮಧ್ಯೆ ಬದುಕುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಜೀವನ ರೂಪಿಸುವ ಸ್ಥಿತಿ ಇಂದು ಇಲ್ಲ. ಲಾಭದಾಯಕ ಹುದ್ದೆಯನ್ನು ಪಡೆಯುವ ಕಡೆಗೆ ನಡೆಯುತ್ತಿದ್ದಾರೆ. ಆಸಕ್ತಿಗೆ ಅನುಸಾರವಾಗಿ ಬದುಕುವ ವೇದಿಕೆಯನ್ನು ಮನುಷ್ಯ ಸೃಷ್ಟಿಸಿಕೊಳ್ಳಬೇಕಾಗಿದೆ.ಸಾಹಿತ್ಯ, ಸಮಾಜ ವಿಜ್ಞಾನ ಇವುಗಳ ಓದು ವರ್ತಮಾನದಲ್ಲಿಅಗತ್ಯವಾದುದು. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಅಗತ್ಯವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಯಾವುದೇ ಚಳವಳಿಗೆ ಮೂರು ಘಟಕಗಳಿರುತ್ತವೆ. ಮುಖ್ಯವಾಗಿ ಸಿದ್ಧಾಂತ, ಕಾರ್ಯಕ್ರಮಗಳು ಮತ್ತು ಹೋರಾಟ. ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ಹೋರಾಟವೂ ವ್ಯರ್ಥ. ಈ ದೃಷ್ಟಿಯಿಂದ ನಾರಾಯಣಗುರು ಚಳವಳಿ ಅರ್ಥಪೂರ್ಣ ಹೋರಾಟ. ಮೂಢನಂಬಿಕೆ, ಕಂದಾಚಾರ, ಜಾತೀಯತೆಯಿಂದ ತೊಳಲಾಡುತ್ತಿದ್ದ ಸಮಾಜವನ್ನು ಹೋರಾಟದ ಮೂಲಕ ಹೊಸಬೆಳಕನ್ನು ತೋರಿಸಿದವರು ನಾರಾಯಣಗುರು ಎಂದರು.
ನಾರಾಯಣ ಗುರುಗಳದ್ದು ಏಕವ್ಯಕ್ತಿ ಚಳವಳಿಯಲ್ಲ. ನಾರಾಯಣ ಗುರುಗಳ ಜೊತೆಗೆ ಡಾ.ಪಲ್ಪು, ಮತ್ತು ಕವಿ ಕುಮಾರನ್ ಆಶನ್ ಇದ್ದರು. ಈ ಮೂವರು ಯುವಕರು ರೂಪಿಸಿದ ಚಳವಳಿ ನಾರಾಯಣಗುರು ಚಳವಳಿಯಾಗಿತ್ತು. ಹಾಗಾಗಿಯೇ ಇದು ಯುವಜನರ ಚಳವಳಿಯಾಗಿ ರೂಪುಗೊಂಡಿತ್ತು ಎಂದು ಮಾಹಿತಿ ನೀಡಿದರು.
ನಾರಾಯಣ ಗುರುಗಳದ್ದು ಸಂಘರ್ಷದ ಹಾದಿಯ ಹೋರಾಟವಲ್ಲ. ಅದು ಸೌಹಾರ್ದದ ದಾರಿಯಾಗಿತ್ತು. ನಿರುದ್ಯೋಗ, ಮೂಢನಂಬಿಕೆ ಮತ್ತು ದುಶ್ಚಟ ಇವೇ ಮೊದಲಾದ ಸಮಸ್ಯೆಗಳಿಗೆ ನಾರಾಯಣ ಗುರು ಚಿಂತನೆಯಲ್ಲಿ ಪರಿಹಾರವಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಜೇಸಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್, ವೃತ್ತಿ ಮಾರ್ಗದರ್ಶನ ಬಗ್ಗೆ ತರಬೇತುದಾರ ಅಭಿಜಿತ್ ಕರ್ಕೇರಾ, ಉದ್ಯೋಗಾವಕಾಶಗಳು ಹಾಗೂ ಪೂರ್ವ ಸಿದ್ಧತೆಯ ಬಗ್ಗೆ ಸರ್ವಜ್ಞ ಅಕಾಡೆಮಿಯ ಸುರೇಶ್ಎಂ.ಎಸ್, ಬ್ಯಾಂಕಿಂಗ್ ಅವಕಾಶಗಳ ಬಗ್ಗೆ ಬಂಟ್ವಾಳ ವಿಜಯಾ ಬ್ಯಾಂಕ್ ಮೆನೇಜರ್ ಬೇಬಿ ಕುಂದರ್ತರಬೇತಿ ನೀಡಿದರು.
ಜಿಲ್ಲೆಯ ವಿವಿಧ ಕಾಲೇಜುಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಐಅಖ ವಿದ್ಯಾ ಸಂಸ್ಥೆಯ ಸಂಸ್ಥಾಪಕ ರೋಹಿನಾಥ್ ಪಾದೆ, ಬಂಟ್ವಾಳ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಾಸು ಪೂಜಾರಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಲೋಕೇಶ್ ಸುವರ್ಣ, ಉಪಾಧ್ಯಕ್ಷ ಗಣೇಶ್ ಪೂಂಜರೆಕೋಡಿ, ಕೋಶಾಧಿಕಾರಿ ಲೋಕೇಶ್ ಪೂಜಾರಿ ಪಿ.ಜೆ. ಕಾರ್ಯದರ್ಶಿ ದಿನೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಕಿರಣ್ರಾಜ್ ವಂದಿಸಿದರು. ಅನ್ವೇಷಣಾ ಕಾರ್ಯಾಗಾರದ ಸಂಯೋಜಕ ಚೇತನ್ಎಂ ನಿರೂಪಿಸಿದರು.







