ಹನೂರು: ಉದ್ಘಾಟನೆಗೆ ಮಾತ್ರ ಸೀಮಿತವಾದ ಶುದ್ಧ ಕುಡಿಯುವ ನೀರಿನ ಘಟಕ
ಹನೂರು,ಡಿ.29 : ಹನೂರು ಸಮೀಪದ ಕಣ್ಣೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ವತಿಯಿಂದ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿವ ನೀರಿನ ಘಟಕವನ್ನು ಉದ್ಘಾಟಿಸಿ 2 ತಿಂಗಳೇ ಕಳೆದಿದೆ. ಆದರೆ ಸೇವೆಗೆ ಮಾತ್ರ ಇನ್ನೂ ಲಭ್ಯವಾಗಿಲ್ಲ.
ಗ್ರಾಮದಲ್ಲಿನ ಜನತೆಗೆ ಹಾಗೂ ಹಾಲು ಉತ್ಪಾದಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ಧೇಶದಿಂದ ಹಾಲು ಉತ್ಪಾದಕರ ಸಂಘದ ವತಿಯಿಂದ ಕಳೆದ 4 ತಿಂಗಳ ಹಿಂದೆ 5 ಲಕ್ಷ ರೂ ವೆಚ್ಚದಲ್ಲಿ ಡೇರಿ ಸಮೀಪದಲ್ಲಿಯೇ ಶುದ್ಧ ನೀರಿನ ಘಟಕವನ್ನು ಸ್ಥಾಪನೆ ಮಾಡಲಾಗಿತ್ತು. ಬಳಿಕ ಅ.28ರಂದು ಶಾಸಕ ಆರ್. ನರೇಂದ್ರ ಅವರು ಶುದ್ಧ ಕುಡಿವ ನೀರಿನ ಘಟಕವನ್ನು ಉದ್ಘಾಟಿಸಿದ್ದರು. ಈ ವೇಳೆ ಶಾಸಕರು ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳುವುದರ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದರು.
ಆದರೆ ಶುದ್ಧ ನೀರಿನ ಘಟಕ ಉದ್ಘಾಟನೆಗೆ ಮಾತ್ರ ಸೀಮಿತವಾಗಿದ್ದು, 2 ತಿಂಗಳು ಕಳೆದರೂ ಸಹ ಸೇವೆಗೆ ಮಾತ್ರ ಲಭ್ಯವಾಗಿಲ್ಲ. ಇದರಿಂದ ಗ್ರಾಮದ ಜನತೆಗೆ ಶುದ್ಧ ಕುಡಿವ ನೀರು ದೊರಕುತ್ತಿಲ್ಲ. ಈ ಬಗ್ಗೆ ಡೇರಿಯ ನೌಕರರನ್ನು ಕೇಳಿದರೆ ಇಲ್ಲಸಲ್ಲದ ಕಾರಣ ನೀಡುತ್ತಾರೆ. ಹಣ ವ್ಯಯಿಸಿ ತೆರೆದಿರುವ ನೀರಿನ ಘಟಕ ಪ್ರಯೋಜನಕ್ಕೆ ಬಾರದಂತಾಗಿದೆ. ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಉದ್ಘಾಟನೆಗೊಂಡಿರುವ ಶುದ್ಧ ನೀರಿನ ಘಟಕವನ್ನು ಸೇವೆಗೆ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಇಲ್ಲಿನ ಗ್ರಾಮಸ್ಥರು ಎಂಬವರು ಒತ್ತಾಯಿಸಿದ್ದಾರೆ.







