ಕೆಎಸ್ಸಿಎ ಅಂತರ್ ಪ.ಪೂ.ವಿದ್ಯಾರ್ಥಿ ಕ್ರಿಕೆಟ್: ಕಾರ್ಕಳ ಎಸ್ಎನ್ವಿ ಪ.ಪೂ.ಕಾಲೇಜಿಗೆ ಪ್ರಶಸ್ತಿ

ಮಣಿಪಾಲ, ಡಿ.30: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಣಿಪಾಲದಲ್ಲಿ ನಡೆದ ಅಂತರ್ ಪ.ಪೂ.ಕಾಲೇಜು ಕ್ರಿಕೆಟ್ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಕಾರ್ಕಳದ ಎಸ್.ಎನ್.ವಿ. ಪದವಿ ಪೂರ್ವ ಕಾಲೇಜು ತಂಡ, ಉಡುಪಿಯ ಶಾರದಾ ರೆಸಿಡೆನ್ಶಿಯಲ್ ಕಾಲೇಜು ತಂಡವನ್ನು 10 ವಿಕೆಟ್ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
50 ಓವರುಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಉಡುಪಿ ಶಾರದಾ ತಂಡ ಸೂರಜ್ ಶೆಟ್ಟಿಗಾರ್ (10ಕ್ಕೆ 4), ಸಂದೇಶ್ (21ಕ್ಕೆ 3) ಮತ್ತು ಪ್ರಣಮ್ (21ಕ್ಕೆ 2) ಇವರ ಮಾರಕ ಬೌಲಿಂಗ್ಗೆ ಸಿಲುಕಿ 82 ರನ್ಗಳಿಗೆ ಆಲೌಟಾಯಿತು.
ಇದಕ್ಕೆ ಉತ್ತರವಾಗಿ ಕಾರ್ಕಳ ಎಸ್ಎನ್ವಿ ತಂಡ ಕಿರಣ್ (35) ಮತ್ತು ಪ್ರಣಮ್ (34) ಇವರ ಅಜೇಯ ಆರಂಭಿಕ ವಿಕೆಟ್ ಜೊತೆಯಾಟದಲ್ಲಿ ವಿಜಯಿ ರನ್ಗಳಿಸಿ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕೊನೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾಹೆ ವಿವಿಯ ಸಾಮಾನ್ಯ ಸೇವೆಗಳ ನಿರ್ದೇಶಕ ಕರ್ನಲ್ ಪ್ರಕಾಶ್ಚಂದ್ರ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಪ್ರಭುದೇವ ಮಾನೆ, ರಮೇಶ್, ಮಹಮ್ಮದ್ ಸಿರಾಜುದ್ದೀನ್, ವಿಜಯ ಆಳ್ವ, ಲಿಂಗಪ್ಪ, ನೀಲಾನಂದ ನಾಯಕ್, ರವಿರಾಜ್ ಭಟ್, ಶಿನಾ ಐತಾಳ್ ಕೋಟ, ಬಾಲಕೃಷ್ಣ ಪರ್ಕಳ ಉಪಸ್ಥಿತರಿದ್ದರು.







