ಆಚಾರ್ಯ ಮಧ್ವರ ಸಂದೇಶ ಸಾರ್ವಕಾಲಿಕ: ಪೇಜಾವರ ಶ್ರೀ

ಉಡುಪಿ, ಡಿ.30: ಭಕ್ತಿ ದೀಕ್ಷೆ ಪಡೆದ ಶೂದ್ರನೂ ಬ್ರಾಹ್ಮಣನಂತೆ ಎಂದು ಮಧ್ವ ಆಚಾರ್ಯರ ಸಂದೇಶ ಸಾರ್ವಕಾಲಿಕವಾಗಿದೆ. ಭಕ್ತಿ ಮಾರ್ಗದಿಂದ ಎಲ್ಲರೂ ಮೋಕ್ಷ ಪಡೆಯಬಹುದು ಎಂಬುದು ಮಧ್ವರ ನಿಲುವು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಲದ ವತಿಯಿಂದ ರಾಜಾಂಗಣದಲ್ಲಿ ಶನಿವಾರ ಆಯೋಜಿಸಲಾದ ಆಚಾರ್ಯ ಮಧ್ವರು ಅದೃಶ್ಯರಾಗಿ 700 ವರ್ಷದ ಸಂಸ್ಮರಣೆ ಯಲ್ಲಿ ವಿಶ್ವದಾದ್ಯಂತ ಸಂಚರಿಸುತ್ತಿರುವ ಆನಂದತೀರ್ಥ ಜ್ಞಾನ ಯಾತ್ರೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ತುಳುನಾಡಿನಲ್ಲಿ ಹುಟ್ಟಿ, ದೇಶಾದ್ಯಂತ ಭಕ್ತಿ ಸಿದ್ಧಾಂತ ಪಸರಿಸಿದ ಆಚಾರ್ಯ ಮಧ್ವರ ಸಿದ್ಧಾಂತದ ಪರಿಚಯ ತೌಳವ ಮಾಧ್ವರಿಗೆ ಇಲ್ಲದಿರುವುದು ಖೇದಕರ. ದೇವರಲ್ಲಿ ಭಕ್ತಿ ಹಾಗೂ ಜಗತ್ತಿನಲ್ಲಿ ಕರ್ತವ್ಯ ಮಾಡಿ ಪುಣ್ಯ ಸಂಪಾದಿಸಬಹುದು ಎಂಬ ಪೂರ್ಣ ಸತ್ಯವನ್ನು ನೀಡಿದವರು ಪೂರ್ಣಪ್ರಜ್ಞರು ಎಂದರು.
ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಹಾಮಂಡಲದ ಕೃಷ್ಣರಾಜ ಸರಳಾಯ, ಹರಿಕೃಷ್ಣ ಪುನರೂರು, ಎ.ಪಿ. ಕೊಡಂಚ, ಮಂಜುನಾಥ ಉಪಾದ್ಯಾಯ, ಪ್ರದೀಪ ಕುಮಾರ್ ಕಲ್ಕೂರ, ರಂಜನ್ ಕಲ್ಕೂರ, ಅರವಿಂದ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.







