ರಾಜಕಾರಣಿಗಳು ತಾಯ್ನೆಲದಲ್ಲಿ ನಮ್ಮ ಹಣವನ್ನೇ ದರೋಡೆ ಮಾಡುತ್ತಿದ್ದಾರೆ: ರಜಿನಿಕಾಂತ್

ಚೆನ್ನೈ, ಡಿ. 31: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುವ ತನ್ನ ನಿರ್ಧಾರವನ್ನು ರವಿವಾರ ಘೋಷಿಸಿದ್ದಾರೆ ಹಾಗೂ ತಮಿಳುನಾಡಿನ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲ 234 ಸ್ಥಾಗಳಿಗೆ ಸ್ಪರ್ಧಿಸುವ ಭರವಸೆ ನೀಡಿದ್ದಾರೆ. ಇದರೊಂದಿಗೆ ರಜಿನಿಕಾಂತ್ ರಾಜಕೀಯ ಪ್ರವೇಶದ ಕುರಿತ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತುಂಬಿದ ಅಭಿಮಾನಿಗಳು ಕಿವಿಗಡಚಿಕ್ಕುವ ಚಪ್ಪಾಳೆ ನಡುವೆ 67 ವರ್ಷದ ರಜನಿಕಾಂತ್, ತಾನು ರಾಜಕೀಯ ಪ್ರವೇಶಿಸುವುದನ್ನು ಘೋಷಿಸಿದರು.
ಬಾಬಾ ಚಿತ್ರದ ಯೋಗದ ಹಸ್ತ ಚಿಹ್ನೆ ತೋರಿಸಿದ ರಜನಿಕಾಂತ್, ಪ್ರಾಮಾಣಿಕ ಹಾಗೂ ಜಾತಿ ರಾಜಕೀಯದಿಂದ ಮುಕ್ತ ಆಧ್ಯಾತ್ಮಿಕ ರಾಜಕೀಯದ ಸರಕಾರವನ್ನು ನಾವು ಅಸ್ತಿತ್ವಕ್ಕೆ ತರುತ್ತೇವೆ. ಇದು ನಮ್ಮ ಗುರಿ ಎಂದರು.
ಮುಖ್ಯಮಂತ್ರಿ ಹುದ್ದೆ ತುಂಬಾ ಹಿಂದೆಯೇ ನನಗೆ ಒಲಿದು ಬಂದಿತ್ತು. ನಾನೇ ತಿರಸ್ಕರಿಸಿದ್ದೆ. ಮುಖ್ಯಮಂತ್ರಿ ಹುದ್ದೆ ಹೊಂದುವುದು ನನ್ನ ಉದ್ದೇಶ ಅಲ್ಲ ಎಂದು ಅವರು ಹೇಳಿದ್ದಾರೆ.
‘‘ಕರ್ಮಣ್ಯೇ ವಾಧಿಕಾರಸ್ತೆ ಮಾಫಲೇಶು ಕದಾಚನ’’ (ನಿನ್ನ ಕೆಲಸವನ್ನು ನೀನು ಮಾಡು, ಫಲವನ್ನು ನಿರೀಕ್ಷಿಸಬೇಡ) ಎಂಬ ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖಿಸಿದ ಅವರು, ನಾನು ನನ್ನ ಕೆಲಸ ಮಾಡುತ್ತೇನೆ ಉಳಿದುದನ್ನು ದೇವರಿಗೆ ಬಿಡುತ್ತೇನೆ ಎಂದಿದ್ದಾರೆ.
ಪ್ರಜಾಪ್ರಭುತ್ವ ಕೆಟ್ಟ ಸ್ವರೂಪದಲ್ಲಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ನಮ್ಮ ತಾಯ್ನೆಲೆದಲ್ಲಿ ನಮ್ಮ ಹಣವನ್ನೇ ದರೋಡೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ವ್ಯವಸ್ಥೆಯ ಅಡಿಪಾಯ ಬದಲಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದರು.
ಈ ಹಂತದಲ್ಲಿ ನಾನು ರಾಜಕೀಯ ಪ್ರವೇಶಿಸದೇ ಇದ್ದರೆ, ನನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿಸಿದ ಜನರಿಗೆ ಅವಮಾನ ಎಸಗಿದಂತೆ. ಇದು ಸಿನೆಮಾ ಅಲ್ಲ. ವಾಸ್ತವ ಎಂದು ರಜನಿಕಾಂತ್ ಹೇಳಿದರು.
ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಶುಭ ಹಾರೈಕೆ ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಕಮಲ್ ಹಾಸನ್ ಸೇರಿದಂತೆ ಹಲವು ನಟ-ನಟಿಯರು ಶುಭ ಹಾರೈಸಿದ್ದಾರೆ. ‘‘ಸಹೋದರ ರಜನಿಯ ಸಾಮಾಜಿಕ ಜವಾಬ್ದಾರಿ ಹಾಗೂ ರಾಜಕೀಯ ಪ್ರವೇಶವನ್ನು ನಾನು ಸ್ವಾಗತಿಸುತ್ತೇನೆ’’ ಎಂದು ಕಮಲ್ ಹಾಸ್ ಟ್ವೀಟ್ ಮಾಡಿದ್ದಾರೆ. ‘‘2017ರ ಕೊನೆ ದಿನವಾದ ರವಿವಾರ ಅವರು ವರ್ಷದ ಅತಿ ದೊಡ್ಡ ಸುದ್ದಿ ನೀಡಿದ್ದಾರೆ: ರಜನಿಕಾಂತ್ ರಾಜಕೀಯ ಸೇರುತ್ತಿದ್ದಾರೆ. ಜೈ ಹೋ’’ ಎಂದು ನಟ ಅನುಪಮ್ ಖೇರ್ ಬರೆದುಕೊಂಡಿದ್ದಾರೆ. ‘‘ಉದಾತ್ತ ಉದ್ದೇಶದಿಂದ ರಾಜಕೀಯ ಪ್ರವೇಶಿಸುತ್ತಿರುವುದರಿಂದ ಅವರು ಇನ್ನಷ್ಟು ಪ್ರೀತಿಗೆ ಪಾತ್ರರಾಗಲಿದ್ದಾರೆ’’ ಎಂದು ರಿತೇಶ್ ದೇಶ್ಮುಖ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರೆ, ನಟಿ ಖುಷ್ಪೂ ಕೂಡ ಟ್ವೀಟ್ ಮಾಡಿ ರಜಿನಿಕಾಂತ್ಗೆ ಶುಭ ಹಾರೈಸಿದ್ದಾರೆ.







