ನಾಗೇಂದ್ರ ನನ್ನ ಸಹೋದರ, ಬಿಜೆಪಿಯಲ್ಲಿರುವಂತೆ ಮನವೊಲಿಸುತ್ತೇನೆ: ಶ್ರೀರಾಮುಲು
ಬಳ್ಳಾರಿ, ಜ.1: ಶಾಸಕ ಬಿ.ನಾಗೇಂದ್ರ ಅವರು ನಮ್ಮೊಂದಿಗೆ ಇದ್ದರೂ ಅವರು ಆಯ್ಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ. ಅವರೊಂದಿಗೆ ನಮಗೆ ಕುಟುಂಬದ ಸಂಬಂಧ ಇದೆ. ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಬಗ್ಗೆ ನನಗೇನೂ ಹೇಳಿಲ್ಲ. ಹೋಗುವ ನಿರ್ಧಾರ ತೆಗೆದುಕೊಂಡಿದ್ದರೆ ಅವರನ್ನು ಸಾಧ್ಯವಾದಷ್ಟು ಬಿಜೆಪಿಯಲ್ಲಿರುವಂತೆ ಮನವೊಲಿಸುವ ಪ್ರಯತ್ನ ಮಾಡುವೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.
ಸೋಮವಾರ ಕೂಡ್ಲಿಗಿಯಲ್ಲಿ ಜ. 4ರಂದು ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ನನ್ನ ಸಹೋದರ ಇದ್ದಂತೆ, ಬೇರೆ ಎಲ್ಲೋ ಇದ್ದಾರೆಂದು ಮಾಹಿತಿ ಸಿಕ್ಕಿದೆ. ಸಂಪರ್ಕಕ್ಕೆ ಸಿಗುತ್ತಿಲ್ಲ. ಹೊಸ ವರ್ಷದ ಹಿನ್ನೆಲೆಯಲ್ಲಿ ಹೊರಗಡೆ ಇದ್ದಾರೆಂದು ಗೊತ್ತಾಗಿದೆ. ಕೆಲವೊಮ್ಮೆ ರಾಜಕಾರಣದಲ್ಲಿ ಈ ರೀತಿ ಆಗೋದು ಅನಿವಾರ್ಯ. ಅವರು ಕಾಂಗ್ರೆಸ್ಗೆ ಹೋಗಲ್ಲ ಎಂಬ ವಿಶ್ವಾಸ ಇದೆ. ಹಾಗೊಂದು ವೇಳೆ ಹೋದರೆ ರಾಜಕೀಯದಲ್ಲಿ ಇದೆಲ್ಲ ಸಹಜ ಎಂದು ಬಂದಿದ್ದನ್ನು ಧೈರ್ಯದಿಂದ ಎದುರಿಸುತ್ತೇವೆ ಎಂದರು.
ಇಂದು ವ್ಯಕ್ತಿ ಆಧರಿಸಿ ರಾಜಕೀಯ ಇಲ್ಲ. ಪಕ್ಷ ಆಧಾರಿತ ರಾಜಕಾರಣ ಇದೆ. ಇಂದು ಬಿಜೆಪಿ ಪಕ್ಷ ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಜಿಲ್ಲೆಯ 9 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪರಿವರ್ತನಾ ಯಾತ್ರೆ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂಸದನಾಗಿ ನನ್ನ ಕೆಲಸ ಮಾಡುವೆ. ಕೂಡ್ಲಿಗಿಯ ಕಾರ್ಯಕರ್ತರ ಅಭಿಪ್ರಾಯ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ ಎಂದು ತಿಳಿಸಿದರು.