ಹರಪನಹಳ್ಳಿ: ವನ್ಯಜೀವಿಗಳ ಅಕ್ರಮ ಸಾಗಾಟ; 6 ಜನರ ಬಂಧನ

ಹರಪನಹಳ್ಳಿ,ಜ.2: ತಾಲೂಕಿನ ನಂದಿಬೇವೂರು ಗ್ರಾಮದಿಂದ ಕಾರಿನಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಸಾಗಿಸುತ್ತಿದ್ದ 6 ಜನರ ತಂಡವನ್ನು ಹರಪನಹಳ್ಳಿ ಪೊಲೀಸರು ಹೂವಿನ ಹಡಗಲಿ ಕ್ರಾಸ್ನ ಎ.ಸಿ. ಸರ್ಕಲ್ ಬಳಿ ಮಂಗಳವಾರ ಬಂಧಿಸಿದ್ದಾರೆ.
ಮಂಗಳೂರಿನ ಅಬ್ದುಲ್ ಖಾದರ್, ಶಂಭು, ನಂದಿಬೇವೂರಿನ ಅಲ್ಲಾ ಭಕ್ಷಿ, ಹೂವಿನ ಹಡಗಲಿ ತಾಲೂಕಿನ ಲೋಕ್ಯಾನಾಯ್ಕ, ಚಿಕ್ಕಮಗಳೂರು ಜಿಲ್ಲೆಯ ಜಯಣ್ಣ, ವೀರೆಂದ್ರನಾಯ್ಕ ಬಂಧಿತರು. ಇವರು ನಂದಿ ಬೇವೂರಿನಿಂದ ಎರಡು ತಲೆಯ 1 ಹಾವು, ಕಾಡು ಜಾತಿಯ ಗೂಬೆ, ಪಕ್ಷಿಗಳನ್ನು ಕೆ.ಎ 13, ಎ 5283 ನೋಂದಣಿಯ ಸ್ಯಾಂಟ್ರೋ ಕಾರಿನಲ್ಲಿ ಮಂಗಳೂರಿಗೆ ಸಾಗಿಸುತ್ತಿದ್ದಾಗ ಹರಪನಹಳ್ಳಿ ಪಿಎಸ್ಐ ಎಸ್.ಎಂ. ಉಮೇಶ್ ಕುಮಾರ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಬಂಧಿತರಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು ನಾಲ್ಕೂವರೆ ಕೆಜಿ ತೂಕದ ಎರಡು ತಲೆಯ ಹಾವು ಹಾಗೂ ಗೂಬೆಯನ್ನು ಆರೋಪಿಗಳಿಂದ ವಶಪಡಿಸಿಕೊಂಡು, 6 ಜನರನ್ನು ಬಂಧಿಸಲಾಗಿದೆ.
ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕೊಟ್ಟುರೇಶ್, ವಿನಾಯಕ, ಮಾರುತಿ, ಕೊಟ್ರೇಶ್ ಮತ್ತಿಹಳ್ಳಿ, ಮಲ್ಲಿಕಾರ್ಜುನ್, ಮಧು ಮತ್ತಿತರರಿದ್ದರು.





