ಗುಂಡ್ಲುಪೇಟೆ: ಮರಿಯಾನೆ ಸಾವು
ಗುಂಡ್ಲುಪೇಟೆ, ಜ.2: ತಾಯಿಂದ ಬೇರಾಗಿದ್ದ ಮರಿಯಾನೆ ಅರಣ್ಯ ಇಲಾಖೆಯ ವೈದ್ಯರು ನೀಡಿದ ಚಿಕಿತ್ಸೆಯ ನಡುವೆಯೂ ಜ್ವರದಿಂದ ಬಳಲಿ ಸಾವಿಗೀಡಾಯಿತು ಎನ್ನಲಾಗಿದೆ.
ಜ 1ರಂದು ಓಂಕಾರ್ ವಲಯ ಅರಣ್ಯದಿಂದ ತಾಲೂಕಿನ ಕುರುಬರಹುಂಡಿ ಸಮೀಪಕ್ಕೆ ಮೇವನ್ನರಸಿ ಹೊರಬಂದ ಆನೆಗಳ ಹಿಂಡಿನೊಡನೆ ಜನರ ಗದ್ದಲದಿಂದ ಎಂಟು ತಿಂಗಳ ಹೆಣ್ಣುಮರಿಯು ತಾಯಿಯಿಂದ ಬೇರಾಗಿತ್ತು. ಹಸಿವು ಬಾಯಾರಿಕೆಯಿಂದ ಬಳಲಿದ್ದ ಮರಿಗೆ ಚಿಕಿತ್ಸೆ ನೀಡಿ ತಾಯಿಯನ್ನು ಸೇರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹುಡುಕಾಟ ನಡೆಸಿದ್ದರೂ ಯಾವುದೇ ಉಪಯೋಗವಾಗಲಿಲ್ಲ. ಇದರಿಂದ ಮರಿಯನ್ನು ಓಂಕಾರ್ ಕಚೇರಿಗೆ ಕರೆತರಲಾಗಿತ್ತು. ತಡರಾತ್ರಿಯಲ್ಲಿ ಜ್ವರ ಹೆಚ್ಚಾಗಿದ್ದರಿಂದ ಅರಣ್ಯ ಇಲಾಖೆಯ ವೈದ್ಯ ಡಾ.ನಾಗರಾಜು ಚಿಕಿತ್ಸೆ ನೀಡಿದ್ದರು. ಮಧ್ಯಾಹ್ನದವರೆಗೂ ಚಟುವಟಿಕೆಯಿಂದ ಕೂಡಿದ್ದ ಮರಿಯು ಮೂರುಗಂಟೆ ವೇಳೆಗೆ ಸಾವಿಗೀಡಾಯಿತು ಎಂದು ವರದಿಯಾಗಿದೆ.
Next Story





