ಸೊರಬ: ಮುಸ್ಲಿಂ ಹಿತ ರಕ್ಷಣಾ ಸಮಿತಿ ಟೌನ್ ಪದಾಧಿಕಾರಿಗಳ ಸಭೆ

ಸೊರಬ,ಜ.3 : ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕಿದ್ದ ಕೆಲವು ಮಾಧ್ಯಮಗಳು ಜನರಲ್ಲಿ ಅನಾವಶ್ಯಕ ಗೊಂದಲಗಳನ್ನು ಸೃಷ್ಟಿಸಿ, ಸತ್ಯ ಸಂಗತಿಗಳನ್ನು ಮರೆಮಾಚಿ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ದೇಶ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮುಸ್ಲಿಂ ಹಿತರಕ್ಷಣಾ ಸಮಿತಿಯ ತಾಲೂಕು ಅಧ್ಯಕ್ಷ ಸೈಯದ್ ಅಹಮದ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣಕ್ಕೆ ಹೊಂದಿಕೊಂಡಿರುವ ಹೊಸಪೇಟೆ ಬಡಾವಣೆಯಲ್ಲಿ ಮುಸ್ಲಿಂ ಹಿತ ರಕ್ಷಣಾ ಸಮಿತಿ ಟೌನ್ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶ-ವಿದೇಶಗಳಲ್ಲಿ ಇಸ್ಲಾಂ ವಿರೋಧಿ ಚಟುವಟಿಕೆಗಳು ಪ್ರತಿ ನಿತ್ಯ ನಡೆಯುತ್ತಲೇ ಇದೆ. ಜಗತ್ತಿನಾದ್ಯಂತ ಜಾತ್ಯಾತೀತ ಮನಸ್ಥಿತಿಯ ಜನರು ಶೇ80 ರಷ್ಟಿದ್ದರೆ, ಗಲಾಟೆ, ದೊಂಬಿ ಇತರೆ ಸಮಾಜ ಘಾತುಕ ಕೃತ್ಯಗಳನ್ನು ಬೆಂಬಲಿಸುವ ಹಾಗು ನಡೆಸುವವರ ಸಂಖ್ಯೆ ಕೇವಲ ಶೇ 20ರಷ್ಟು ಮಾತ್ರವಿದೆ. ಇವರು ಒಗ್ಗಟಿನಿಂದ ಕೆಲಸ ಮಾಡುತ್ತಿದ್ದು, ಸಮಾಜದ ಒಳಿತನ್ನು ಬಯಸುವ ಶೇ80 ರಷ್ಟು ಜನರಲ್ಲಿ ಕ್ರಿಯಾಶಿಲತೆ ಮತ್ತು ಒಗ್ಗಟಿನ ಕೊರತೆ ಕಾಣುತ್ತಿದ್ದು ಪ್ರಸ್ತುತ ವಿದ್ಯಮಾನದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಅವಲೋಕಿಸಿ ಎಲ್ಲರೂ ಒಗ್ಗೂಡಿ ಸಮಾಜ ಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಬೇಕಾಗಿದೆ ಎಂದರು.
ಮುಸ್ಲಿಂ ಸಮುದಾಯದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮುದಾಯದ ಅಭಿವೃದ್ದಿಗಾಗಿ ಸರ್ಕಾರಗಳು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ನೂರಾರು ಕೊಟಿ ಹಣ ಮೀಸಲಿಟ್ಟಿದೆ. ಮಾಹಿತಿಯ ಕೊರತೆಯಿಂದಾಗಿ ಸಮುದಾಯ ಅನುಕೂಲಗಳನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಮುಸ್ಲಿಂ ಹಿತರಕ್ಷಣಾ ಸಮಿತಿ ತಾಲೂಕಿನ ಎಲ್ಲಾ ಹೋಬಳಿಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದು, ಹೋಬಳಿವಾರು ಪದಾಧಿಕಾರಿಗಳು ಸಮುದಾಯದ ಅಭಿವೃದ್ದಿಗಾಗಿ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಎಂ.ಬಶೀರ್ ಅಹಮದ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಜಗತ್ತಿನಲ್ಲಿ ತಲೆ ತಗ್ಗಿಸುವಂತಾಗಿದೆ. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮೇಲೆ ದೌರ್ಜನ್ಯ ಶೋಷಣೆ ನಡೆಯುತ್ತಲೇ ಇದೆ. ಸುಳ್ಳು ಸುದ್ದಿಗಳನ್ನು ಮುಂದಿಟ್ಟುಕೊಂಡು ಮುಸ್ಲೀಂ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆ. ಸಾಚಾರ್ ವರದಿಯನ್ವಯ ಮುಸ್ಲಿಂ ಸಮುದಾಯ ಶಿಕ್ಷಣದಲ್ಲಿ ಹಿಂದುಳಿದಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಬೇಕಾಗಿದೆ. ಟಿವಿ ಮಾಧ್ಯಮಗಳು ಕ್ಷುಲ್ಲಕ ವಿಷಯಗಳನ್ನು ದೊಡ್ಡದಾಗಿ ಬಿಂಬಿಸಿ ಸಮಾಜದಲ್ಲಿ ತಪ್ಪು ಮಾಹಿತಿಗಳನ್ನು ಬಿತ್ತರಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಯಾವುದೇ ಪಕ್ಷದಲ್ಲಿದ್ದರೂ, ನಮ್ಮೊಳಗಿನ ಭೇದ-ಭಾವಗಳನ್ನು ಬದಿಗೊತ್ತಿ, ಅಂತರಿಕ ವಿಚಾರಗಳನ್ನು ದೂರವಿಟ್ಟು, ಯಾವುದೇ ಭಾಗದಲ್ಲಿ ಸಮುದಾಯದ ಶೋಷಣೆಯಾದರೂ ಒಗ್ಗಟ್ಟಾಗಿ ಖಂಡಿಸಬೇಕಾಗಿದೆ. ಮುಸ್ಲಿಂ ಹಿತರಕ್ಷಣಾ ಸಮಿತಿ ಮುಸ್ಲೀಮರೂ ಸೇರಿದಂತೆ ಎಲ್ಲಾ ವರ್ಗ, ಜಾತಿ ಬಾಂಧವರಿಗೂ ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿಯಾಗಿ ಕೆಲಸಮಾಡುವಂತೆ ಸಲಹೆ ನೀಡಿದ ಅವರು, ದೇಶದ ಹಿತ ಹಾಗು ರಕ್ಷಣೆಗಾಗಿ ಜಾತಿ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ.ಮುಕ್ತಿಯಾರ್ ಅಹ್ಮದ್, ಉಪಾಧ್ಯಕ್ಷ ಚಾಂದ್ ಪಾಶಾ, ಟೌನ್ ಅಧ್ಯಕ್ಷ ಬಿ.ಹಸನ್, ಉಪಾಧ್ಯಕ್ಷ ಕೆ.ಕೆ.ಸೈಯದ್ ರಫೀಕ್, ಯು.ಸಲೀಂ, ಖಲೀಲ್ ಸಾಬ್, ಕುಪ್ಪಗಡ್ಡೆ ರಶೀದ್, ಟಿ. ಮುಶ್ತಾಕ್ ಅಹ್ಮದ್, ಖಮರುದ್ದೀನ್ ಕುಪ್ಪಗಡ್ಡೆ, ಬಾಬು ಸಾಬ್ ಆನವಟ್ಟಿ, ನಜೀರ್ ಸಾಬ್ ಚಂದ್ರಗುತ್ತಿ, ಮುನೀರ್ ಸಾಬ್ ಮತ್ತಿತರರಿದ್ದರು.







