ಸಮಾನ ಶಿಕ್ಷಣದಿಂದ ಮಾತ್ರ ದೇಶಕ್ಕಂಟಿರುವ ಪೀಡುಗುಗಳ ನಿರ್ಮೂಲನೆ: ಮಾವಳ್ಳಿ ಶಂಕರ್
ಬೆಂಗಳೂರು, ಜ.3: ಸಮಾನ ಶಿಕ್ಷಣ ಜಾರಿಯಾದರೆ ಮಾತ್ರ ದೇಶಕ್ಕಂಟಿರುವ ಎಲ್ಲ ಪಿಡುಗುಗಳ ನಿರ್ಮೂಲನೆ ಸಾಧ್ಯವೆಂದು ದಸಂಸ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಗಜ್ಯೋತಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರೆಯ ಅಂಗವಾಗಿ ನಗರದ ಪುರಭವನದ ಮುಂಭಾಗ ಸಮಾನ ಶಿಕ್ಷಣ ಅನುಷ್ಠಾನಕ್ಕಾಗಿ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಗಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ ಆಶಯ ನಮ್ಮೆಲ್ಲರ ಕರ್ತವ್ಯವಾಗಲಿ. ನಾವೆಲ್ಲರೂ ರಾಜ್ಯದಲ್ಲಿ ಸಮಾನ ಶಿಕ್ಷಣ ಜಾರಿಯಾಗುವವರೆಗೆ ನಿರಂತರವಾಗಿ ಹೋರಾಟ ಮುಂದುವರಿಸೋಣವೆಂದು ಹೇಳಿದರು.
ಜಗಜ್ಯೋತಿ ಸಾವಿತ್ರಿ ಬಾಯಿ ಫುಲೆ ನೂರಾರು ವರ್ಷಗಳ ಹಿಂದೆ ಮಹಿಳೆಯರ ಶಿಕ್ಷಣಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟರು. ಅವರ ಆದರ್ಶಗಳು ನಮಗೆ ಮಾದರಿಯಾಗಬೇಕು. ಅವರು ಮಾಡಿರುವ ತ್ಯಾಗ, ಪರಿಶ್ರಮಗಳನ್ನು ನಾವು ಅಳವಡಿಸಿಕೊಳ್ಳುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಮತ್ತು ಸಮಾನ ಶಿಕ್ಷಣ ಜಾರಿಯಾಗುವವರೆಗೆ ಹೋರಾಟವನ್ನು ನಿಲ್ಲಿಸಬಾರದು ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಜೋತಪ್ಪ ಹೊಸಳ್ಳಿ, ಜಿಲ್ಲಾ ಸಂಚಾಲಕ ಸಿದ್ಧಾಪುರ ಮಂಜುನಾಥ್, ನೆರಳೂರು ಮುನಿಕೃಷ್ಣಪ್ಪ, ಗಣತಿಪುರ ಮಂಜು, ಸಂಪಂಗಿರಾಮು, ಮಾನವ ಹಕ್ಕು ಹೋರಾಟಗಾರ ನರಸಿಂಹಮೂರ್ತಿ ಸೇರಿದಂತೆ ನೂರಾರು ಹೋರಾಟಗಾರರು ಭಾಗವಹಿಸಿದ್ದರು.
ಹಕ್ಕೊತ್ತಾಯಗಳು: *ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಸರಕಾರಿ ಶಾಲಾ ಸಬಲೀಕರಣ ಸಮಿತಿ-2017 ವರದಿಯನ್ನು ಕೂಡಲೇ ಜಾರಿಗೆ ತರಬೇಕು.
*ಸಾವಿತ್ರಿ ಬಾಯಿ ಫುಲೆ ಜನ್ಮದಿನವನ್ನು ಶಾಲೆಗಳಲ್ಲಿ ಆಚರಿಸಲು ಸರಕಾರ ಘೋಷಿಸಬೇಕು.
*ಸಾವಿತ್ರಿ ಬಾಯಿ ಫುಲೆ ಜೀವನ-ಸಾಧನೆ-ಹೋರಾಟಗಳನ್ನು ಪಠ್ಯಗಳಲ್ಲಿ ಅಳವಡಿಸಬೇಕು.
*ಪ್ರಸಕ್ತ ವರ್ಷದಿಂದಲೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಬೇಕು.
*ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಬೇಕು.
*ಶಿಕ್ಷಣದ ಖಾಸಗೀಕರಣದ ಎಲ್ಲ ವಿಧಾನಗಳನ್ನು ಈ ಕೂಡಲೇ ಕೈಬಿಡಬೇಕು.







