ಬಂಟ್ವಾಳ: ಹಫ್ತಾಕ್ಕಾಗಿ ಇಬ್ಬರು ಉದ್ಯಮಿಗಳಿಗೆ ಬೆದರಿಕೆ ಕರೆ: ದೂರು

ಬಂಟ್ವಾಳ, ಜ. 3: ಭೂಗತ ಪಾತಕಿ ಕಲಿ ಯೊಗೀಶನ ಹೆಸರಿನಲ್ಲಿ ಬಂಟ್ವಾಳದ ಇಬ್ಬರು ಉದ್ಯಮಿಗಳಿಗೆ ಹಫ್ತಾಕ್ಕಾಗಿ ಬೆದರಿಕೆ ಕರೆಯೊಂದು ಬಂದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ಮಾರ್ಕೆಟ್ ರಸ್ತೆಯಲ್ಲಿರುವ ಅಂಚನ್ ಗಾರ್ಮೆಂಟ್ಸ್ನ ಮಾಲಕ ಪ್ರಕಾಶ್ ಅಂಚನ್ ಹಾಗೂ ರಥ ಬೀದಿಯಲ್ಲಿರುವ ಸ್ವರ್ಣೋದ್ಯಮಿ ವಿಎನ್ಆರ್ ಗೋಲ್ಡ್ನ ಮಾಲಕ ನಾಗೇಂದ್ರ ಬಾಳಿಗ ಅವರಿಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.
ಪ್ರಕಾಶ್ ಅಂಚನ್ ಅವರಿಗೆ ಕರೆ ಮಾಡಿ 25 ಲಕ್ಷ ರೂ. ಹಾಗೂ ನಾಗೇಂದ್ರ ಬಾಳಿಗ ಅವರಿಗೆ 50 ಲಕ್ಷ ರೂ. ಹಫ್ತಾ ಬೇಡಿಕೆ ಇರಿಸಿ ಬೆದರಿಕೆ ಕರೆ ಬಂದಿದೆ. ಹಣ ನೀಡದಿದ್ದಲ್ಲಿ ಇತ್ತೀಚೆಗೆ ಮಂಗಳೂರಿನ ಸಂಜೀವ ಶೆಟ್ಟಿ ಅಂಗಡಿಯಲ್ಲಿ ಆದ ಗತಿ ನಿಮಗೂ ಆದೀತು. ಹಾಗೆಯೇ ನಿಮ್ಮ ಸಂಸಾರವನ್ನು ಮುಗಿಸುವು ದಾಗಿ ಬೆದರಿಕೆ ಹಾಕಿದ್ದಾನೆ ಎಂದು ಇಬ್ಬರು ಉದ್ಯಮಿಗಳು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಅಂಗಡಿಗೆ ಭದ್ರತೆ
ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಬಂಟ್ವಾಳ ಮಾರ್ಕೆಟ್ ರಸ್ತೆಯಲ್ಲಿರುವ ಅಂಚನ್ ಗಾರ್ಮೆಂಟ್ಸ್ನ ಮಾಲಕ ಪ್ರಕಾಶ್ ಅಂಚನ್ ಹಾಗೂ ರಥ ಬೀದಿಯಲ್ಲಿರುವ ಸ್ವರ್ಣೋದ್ಯಮಿ ವಿಎನ್ಆರ್ ಗೋಲ್ಡ್ನ ಮಾಲಕ ನಾಗೇಂದ್ರ ಬಾಳಿಗ ಈ ಇಬ್ಬರು ಉದ್ಯಮಿಗಳ ಅಂಗಡಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ.







