ಗಂಡನ ಕೊಲೆ: ಪತ್ನಿ ಸೇರಿ ಮೂವರ ಸೆರೆ

ಮಡಿಕೇರಿ, ಜ.3: ಇತ್ತೀಚೆಗೆ ಮಾದಾಪುರದ ಇಗ್ಗೋಡ್ಲು ಗ್ರಾಮದಲ್ಲಿ ನಡೆದ ರಂಜು ಪೂವಯ್ಯ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ಹತ್ಯೆಗೈಯಲ್ಪಟ್ಟ ವ್ಯಕ್ತಿಯ ಪತ್ನಿ, ಇಗ್ಗೋಡ್ಲು ಗ್ರಾಮದ ಕಾಳಚಂಡ ಶಾಂತಿ ಪೂವಯ್ಯ(36), ಚೆಂಬೆಬೆಳ್ಳೂರು ಗ್ರಾಮದ ಮಂಡೇಪಂಡ ರಾಜೇಶ್(40) ಹಾಗೂ ಅದೇ ಗ್ರಾಮದ ಮಂಡೇಪಂಡ ಅಶೋಕ(44) ಎಂಬವರೆ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹತ್ಯೆಯ ಬಗ್ಗೆ ಮಾಹಿತಿ ನೀಡಿದರು.
2017 ಡಿ.23ರಂದು ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಇಗ್ಗೋಡ್ಲುವಿನ ಬಾಡಿಗೆ ಮನೆ ಸಮೀಪ ಕಾಳಚಂಡ ರಂಜು ಪೂವಯ್ಯರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆೆ ಕೈಗೊಂಡ ಡಿಸಿಐಬಿ ತಂಡ ಮೂವರು ಆರೋಪಿಗಳನ್ನು ಬಂಧಿಸಿದರು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಶಾಂತಿ ಪೂವಯ್ಯ ಹಾಗೂ ಮತ್ತೊಬ್ಬ ಆರೋಪಿ ರಾಜೇಶ್ ನಡುವೆ ಇದ್ದ ಪ್ರೀತಿಯೇ ಕೊಲೆಗೆ ಕಾರಣವೆಂದು ತಿಳಿದು ಬಂದಿದೆ. ಶಾಂತಿ ಪೂವಯ್ಯರಿಗೆ ಫೇಸ್ಬುಕ್ ಮೂಲಕ ರಾಜೇಶ್ ಎಂಬಾತನ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ತನ್ನ ಪತಿ ಪ್ರತಿದಿನ ಮದ್ಯಪಾನ ಮಾಡಿ ತನಗೆ ಹಾಗೂ ತನ್ನ ಮಕ್ಕಳಿಗೆ ಹಿಂಸೆ ನೀಡುತ್ತಿದ್ದು, ಆತನನ್ನು ಹತ್ಯೆ ಮಾಡಿಸುವಂತೆ ರಾಜೇಶ್ ಬಳಿ ಕೇಳಿಕೊಂಡಿದ್ದಳು ಎನ್ನಲಾಗಿದೆ. ಕೊಲೆ ಮಾಡಿಸಲು ಹಣ ಖರ್ಚಾಗುವುದಾಗಿ ತಿಳಿಸಿದ ರಾಜೇಶ್, ತನ್ನ ಕುಟುಂಬದವನೇ ಆದ ಮಂಡೇಪಂಡ ಅಶೋಕನಿಗೆ, ರಂಜು ಪೂವಯ್ಯರನ್ನು ಕೊಲೆ ಮಾಡಿದರೆ 1.50 ಲಕ್ಷ ರೂ. ನೀಡುವುದಾಗಿ ತಿಳಿಸುತ್ತಾನೆ. ಇದೇ ಪ್ರಕಾರವಾಗಿ ಡಿ.23ರಂದು ಬೆಳಗಿನ ಜಾವ ಮಂಡೇಪಂಡ ರಾಜೇಶ್ ಹಾಗೂ ಅಶೋಕ ವೀರಾಜಪೇಟೆಯಿಂದ ಸ್ನೇಹಿತನ ಬೈಕ್ನಲ್ಲಿ ಹೊರಟು ಇಗ್ಗೋಡ್ಲು ಗ್ರಾಮಕ್ಕೆ ತಲುಪುತ್ತಾರೆ. ಕಾಳಚಂಡ ರಂಜು ಪೂವಯ್ಯ ಅವರು ಮನೆಯಿಂದ ಕೆಳಕ್ಕಿಳಿದು ಬರುವುದನ್ನೆ ಕಾಯುತ್ತಿದ್ದ ಆರೋಪಿ ಅಶೋಕ ತನ್ನ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು.
ಅಪರಾಧ ಪತ್ತೆದಳದ ನಿರೀಕ್ಷಕ ಎಂ.ಮಹೇಶ್ ನೇತೃತ್ವದಲ್ಲಿ ಎಎಸ್ಸೈ ಕೆ.ವೈ.ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್, ವಿ.ಜಿ.ವೆಂಕಟೇಶ್, ಕೆ.ಆರ್. ವಸಂತ, ಎಂ.ಬಿ. ಸುಮತಿ , ಯು.ಎ. ಮಹೇಶ್, ಸಿ.ಕೆ. ರಾಜೇಶ್, ಎಂ.ಎ.ಗಿರೀಶ್, ಚಾಲಕರಾದ ಕೆ.ಎಸ್.ಶಶಿಕುಮಾರ್ ಹಾಗೂ ಶೇಷಪ್ಪಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಘಟನೆ ನಡೆದ ಕೇವಲ ಹತ್ತು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ನಗದು ಬಹುಮಾನ ಘೋಷಿಸಿದ್ದಾರೆ.







