ಸಾವಿನ ಮನೆಯಲ್ಲಿ ರಾಜಕಾರಣ ವಿಷಾದನೀಯ : ಹೆಚ್.ಎಂ.ಕಾವೇರಿ ಅಸಮಾಧಾನ
![ಸಾವಿನ ಮನೆಯಲ್ಲಿ ರಾಜಕಾರಣ ವಿಷಾದನೀಯ : ಹೆಚ್.ಎಂ.ಕಾವೇರಿ ಅಸಮಾಧಾನ ಸಾವಿನ ಮನೆಯಲ್ಲಿ ರಾಜಕಾರಣ ವಿಷಾದನೀಯ : ಹೆಚ್.ಎಂ.ಕಾವೇರಿ ಅಸಮಾಧಾನ](https://www.varthabharati.in/sites/default/files/images/articles/2018/01/4/Z CAVERI 1.jpg)
ಮಡಿಕೇರಿ,ಜ.4 : ರಾಜ್ಯದಲ್ಲಿ ನಡೆಯುತ್ತಿರುವ ಹತ್ಯಾ ಪ್ರಕರಣಗಳು ಜಾತಿ ಮತಗಳ ಮೂಲಕ ಮಹತ್ವವನ್ನು ಪಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿರುವ ಜಿ.ಪಂ ಮಾಜಿ ಉಪಾಧ್ಯಕ್ಷರಾದ ಹೆಚ್.ಎಂ.ಕಾವೇರಿ, ಸಾವಿನ ಮನೆಯ ರಾಜಕಾರಣ ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆಯಾಗುವ ವ್ಯಕ್ತಿ ಯಾವ ಪಕ್ಷ ಮತ್ತು ಜಾತಿಗೆ ಸೇರಿದ್ದಾನೆ ಎಂದು ಗುರುತಿಸುವ ಮೂಲಕ ಮತಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದ್ದು, ಇದು ಅತ್ಯಂತ ಕೆಟ್ಟ ರಾಜಕಾರಣವೆಂದು ಅಭಿಪ್ರಾಯಪಟ್ಟರು. ವಿಜಯಪುರದ ದಾನಮ್ಮಳ ಅತ್ಯಾಚಾರ ಮತ್ತು ಕೊಲೆ ಹಾಗೂ ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗಳೆರಡೂ ಅಕ್ಷಮ್ಯ ಅಪರಾಧವೆಂದ ಅವರು, ದಾನಮ್ಮ ಹತ್ಯೆಯನ್ನು ವಿರೋಧಿಸಿ ಜ.6 ರಂದು ಸಮಾನ ಮನಸ್ಕರ ವೇದಿಕೆÀ ನಡೆಸುತ್ತಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿರುವ ವಿಚ್ಛಿದ್ರಕಾರಿ ಘಟನೆಗಳ ಬಗ್ಗೆ ಯುವ ಜನತೆ, ಮಾಧ್ಯಮಗಳು ಹಾಗೂ ರಾಜಕಾರಣಿಗಳು ಪ್ರಜ್ಞಾಪೂರ್ವಕವಾಗಿ ಚಿಂತಿಸುವುದು ಅಗತ್ಯವೆಂದರು.
ಸೇವೆಯಿಂದ ವಜಾಗೊಳಿಸಿ-ಅಮಾಯಕ ಬಾಲಕಿ ದಾನಮ್ಮಳ ಹತ್ಯೆಯನ್ನು ಪ್ರಸ್ತುತ ಮುಚ್ಚಿ ಹಾಕಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಸಾವಿನ ಮರಣೋತ್ತರ ಪರೀಕ್ಷೆಯ ವರದಿ ಬರುವುದಕ್ಕೆ ಮೊದಲೇ ಸಾಮೂಹಿಕ ಅತ್ಯಾಚಾರವಲ್ಲವೆಂದು ಮುಚ್ಚಿ ಹಾಕಲು ಐಜಿಪಿ ಮತ್ತು ಎಸ್ಪಿ ಮುಂದಾಗಿದ್ದಾರೆ ಎಂದು ಆರೋಪಿಸಿದ ಕಾವೇರಿ ಇಬ್ಬರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕೆಂದು ಕಾವೇರಿ ಆಗ್ರಹಿಸಿದರು.ಪ್ರಕರಣವನ್ನು ವಿರೋಧಿಸಿ ಜ.9 ರಂದು ನಡೆಯಲಿರುವ ಬಿಜಾಪುರ ಚಲೋ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದರು.
ಕೊಡಗಿನಲ್ಲಿ ನಡೆದ ಸಾಕಷ್ಟು ದಲಿತ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ದೊರಕದೆ ಇರುವ ಬಗ್ಗೆ ಮಾತನಾಡಿದ ಅವರು ಯಾವುದೇ ಪ್ರಕರಣಗಳು ನಡೆದರೂ ಪ್ರತಿಯೊಂದು ಸಂಘಟನೆಗಳು ಕಾಳಜಿ ವಹಿಸಿ ನ್ಯಾಯ ದೊರಕುವಲ್ಲಿಯವರೆಗೆ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ದಲಿತರಿಗೆ ಸೀಮಿತವಲ್ಲ
ಸಂವಿಧಾನವನ್ನೆ ಬದಲಿಸುವ ಮಾತನಾಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ಧೋರಣೆ ಹಾಸ್ಯಾಸ್ಪದವೆಂದು ಟೀಕಿಸಿದ ಕಾವೇರಿ, ಸಂವಿಧಾನ ಎನ್ನುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗಿದೆ, ಅದು ಕೇವಲ ದಲಿತರಿಗೆ ಸೀಮಿತವಾದುದಲ್ಲವೆಂದು ಕಾವೇರಿ ಹೇಳಿದರು.
ಕೋರೆಗಾಂವ್ ಚಳುವಳಿ ವರ್ಷಾಚರಣೆ ಸಂದರ್ಭ ಮಹಾರಾಷ್ಟ್ರದಲ್ಲಿ ಮರಾಠಿ ಮತ್ತು ದಲಿತರ ನಡುವೆ ಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು. ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಕಾವೇರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಂಟಿಕೊಪ್ಪ ಗ್ರಾ.ಪಂ ಸದಸ್ಯರು ಹಾಗೂ ಎಸ್ಡಿಪಿಐ ಮಹಿಳಾ ಘಟಕದ ಪ್ರಮುಖರಾದ ನಾಗರತ್ನ, ಬಿಎಸ್ಪಿ ಪಕ್ಷದ ಫಿಲೋಮಿನಾ ಉಪಸ್ಥಿತರಿದ್ದರು.