ನಟ ವಿನಯ್ ರಾಜ್ಕುಮಾರ್ ಫೋಟೋ ಶೂಟ್ ದಾವೆ ಪಿಐಎಲ್ ಆಗಿ ಪರಿವರ್ತನೆ
ಬೆಂಗಳೂರು, ಜ.4: ನಿಯಮ ಉಲ್ಲಂಘಿಸಿ ನಗರದ ಹೈಕೋರ್ಟ್ ಆವರಣದೊಳಗೆ ಅನಂತು ವರ್ಸಸ್ ನಸ್ರತ್ ಚಿತ್ರದ ನಾಯಕ ನಟ ವಿನಯ್ ರಾಜ್ಕುಮಾರ್ ಅವರ ಫೋಟೋ ಶೂಟ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ಗುರುವಾ ವಿಭಾಗೀಯ ಪೀಠಕ್ಕೆ ವರ್ಗಾಯಿಸಿತು.
ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂಘಿಸಿದವರನ್ನು ಬಂಧಿಸಲು ವಿಧಾನಸೌಧ ಠಾಣಾ ಸಬ್ ಇನ್ಸ್ಪೆಕ್ಟರ್ಗೆ ನಿರ್ದೇಶಿಸುವಂತೆ ಕೋರಿ ವಕೀಲ ಅಮೃತೇಶ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ಅರ್ಜಿಯಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ನಂತರ ಅರ್ಜಿಯನ್ನು ವಿಭಾಗೀಯ ಪೀಠದ ಮುಂದಿಡಲು ರಿಜಿಸ್ಟ್ರಾರ್ಗೆ ಸೂಚಿಸಿತು.
ಇದಕ್ಕೂ ಮುನ್ನ ನ್ಯಾ.ಬೋಪಣ್ಣ ಅವರು ಅರ್ಜಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿ ವಿಚಾರಣೆ ನಡೆಸುವ ಬಗ್ಗೆ ಪರಿಶೀಲಿಸಲು ವಿಭಾಗೀಯ ಪೀಠಕ್ಕೆ ವರ್ಗಾಯಿಸುವುದಾಗಿ ತಿಳಿಸಿದರು.
ನಗರದ ಹೈಕೋರ್ಟ್ ಆವರಣ ಮತ್ತು ಬೆಂಗಳೂರು ವಕೀಲರ ಸಂಘದ ಗ್ರಂಥಾಲಯದಲ್ಲಿ 2017ರ ಆ.15ರಂದು ಅನಂತು ವರ್ಸಸ್ ನಸ್ರತ್ ಚಿತ್ರಕ್ಕಾಗಿ ನಾಯಕ ನಟ ವಿನಯ್ ರಾಜ್ಕುಮಾರ್ ಅವರ ಫೋಟೋ ಶೂಟ್ ನಡೆಸಲಾಗಿತ್ತು. ಈ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಲಾಂಛನಗಳು ಮತ್ತು ಹೆಸರುಗಳು (ಅನುಚಿತ ನಿಯಂತ್ರಣ) ಕಾಯ್ದೆ-1950ರ ಪ್ರಕಾರ ಸಂಸತ್, ರಾಜ್ಯ ಶಾಸನಸಭೆ, ಸುಪ್ರೀಂಕೋರ್ಟ್, ರಾಜ್ಯ ಹೈಕೋರ್ಟ್, ಕೇಂದ್ರ ಸಚಿವಾಲಯ ಅಥವಾ ರಾಜ್ಯ ಸಚಿವಾಲಯ ಹಾಗೂ ಇತರೆ ಸರಕಾರಿ ಕಚೇರಿಗಳ ಹೆಸರು ಅಥವಾ ಈ ಮೇಲ್ಕಂಡ ಕಚೇರಿ ಕಟ್ಟಡಗಳ ಚಿತ್ರಗಳನ್ನು ಬಳಸುವುದು ನಿಷಿದ್ಧ. ಈ ನಿಯಮ ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂಘಿಸಿ, ಹೈಕೋರ್ಟ್ ಆವರಣದಲ್ಲಿ ವಿನಯ್ ರಾಜ್ಕುಮಾರ್ ಅವರ ಫೊಟೋ ಶೂಟ್ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
ಹಳದಿ ನಾಮಫಲಕದ ವಾಹನ, ಮಾಧ್ಯಮದವರ ಕ್ಯಾಮರಾ ಹಾಗೂ ಲ್ಯಾಪ್ಟಾಪ್ ಸೇರಿ ಇನ್ನಿತರ ವಸ್ತುಗಳನ್ನು ಹೈಕೋರ್ಟ್ ಆವರಣದೊಳಗೆ ತರುವಂತಿಲ್ಲ. ಅದಕ್ಕಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಅನುಮತಿ ಪಡೆಯಬೇಕು. ಫೋಟೋ ಶೂಟ್ಗೆ ಅನುಮತಿ ಪಡೆದಿಲ್ಲ. ಮುಖ್ಯವಾಗಿ 2017ರ ಅ.14ರಂದು ಹೈಕೋರ್ಟ್ ಸಹಾಯಕ ಪೊಲೀಸ್ ಆಯುಕ್ತರು ದಾಖಲಿಸಿದ ದೂರಿನ ಮೇಲೆ ಈವರೆಗೂ ವಿಧಾನಸೌಧ ಠಾಣಾ ಸಬ್ ಇನ್ಸ್ಪೆಕ್ಟರ್ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ಎಸಿಪಿಯ ದೂರಿನ ತನಿಖೆ ನಡೆಸಲು ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂಘಿಸಿದವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲು ವಿಧಾನಸೌಧ ಠಾಣಾ ಸಬ್ ಇನ್ಸ್ಪೆಕ್ಟರ್ಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.







