ಜನರ ಚಿಂತನ ಕ್ರಮ, ಶಿಕ್ಷಣ ವ್ಯವಸ್ಥೆ ಬದಲಾಗಬೇಕು: ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ
ಮಣಿಪಾಲ ಅಕಾಡಮಿಯ ಪ್ಲಾಟಿನಂ ಜ್ಯುಬಿಲಿ ಉದ್ಘಾಟನೆ

ಮಣಿಪಾಲ, ಜ. 4: ಈ ದೇಶದ ಜನರ ಚಿಂತನಾಕ್ರಮ ಹಾಗೂ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾದ ಅನಿವಾರ್ಯತೆ ಇದೆ ಎಂದು ಉಡುಪಿ ಮೂಲದ ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಬಿ.ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
ಸ್ಥಾಪನೆಯ 75 ವರ್ಷಗಳನ್ನು ಪೂರ್ಣಗೊಳಿಸಿರುವ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ನ ಪ್ಲಾಟಿನಮ್ ಜ್ಯುಬಿಲಿ ಸಂಭ್ರಮವನ್ನು ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನ ಚೈತ್ಯಹಾಲ್ನಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಮ್ಮ ಶಿಕ್ಷಣದ ಅಂತಿಮ ಗುರಿ ಯಾವುದೇ ವಿಷಯದಲ್ಲಿ -ಮೆಡಿಸಿನ್, ಇಂಜಿನಿಯರಿಂಗ್ ಅಥವಾ ಇನ್ನೊಂದು ವಿಷಯದಲ್ಲಿ-ಕೇವಲ ಡಿಗ್ರಿಯೊಂದನ್ನು ಪಡೆಯುವುದು ಮಾತ್ರವಲ್ಲ, ಆ ಡಿಗ್ರಿಯ ಮೂಲಕ ಜನರ ಸೇವೆ ಮಾಡಲು ಸಾಧ್ಯವಾಗಿ,ಅದರಿಂದ ಬಲಿಷ್ಠ ಸಮಾಜವನ್ನು ನಿರ್ಮಿಸುವುದಾಗಿದೆ ಎಂದವರು ಹೇಳಿದರು.
ಆದರೆ ಇಂದು ಅದು ನಡೆಯುತ್ತಿಲ್ಲ. ಸಾಧಕನೊಬ್ಬ ಇನ್ನೊಬ್ಬರಿಗೆ ನೀಡುವ ಸಾಮರ್ಥ್ಯ ಹೊಂದಿರಬೇಕು. ನಾವು ವೈದ್ಯರೋ, ಇಂಜಿನಿಯರೋ, ವಕೀಲರೋ, ವಿದ್ವಾಂಸರೋ ಅಥವಾ ಗವರ್ನರ್ ಆಗಿ ಅಷ್ಟಕ್ಕೆ ತೃಪ್ತರಾಗುತ್ತೇವೆ. ನಾವು ಸಮಾಜಕ್ಕೆ ಏನನ್ನೂ ನೀಡುತ್ತಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ನಮ್ಮಲ್ಲಿ ಪ್ರಾಕೃತಿಕ ಸಂಪತ್ತಿಗೆ ಏನೇನೂ ಕೊರತೆಯಿಲ್ಲ. ಅವುಗಳನ್ನು ಬಳಸಿ ಭಾರತವನ್ನು ಸರ್ವಶ್ರೇಷ್ಠ ದೇಶವಾಗಿ ರೂಪಿಸಬಹುದು ಎಂದರು.
ನಾವು ಕನಸುಗಳನ್ನು ಕಾಣಬೇಕು ಹಾಗೂ ಆ ಕನಸುಗಳನ್ನು ನನಸಾಗಿಸಲು ಪ್ರಯತ್ನಗಳನ್ನು ಮಾಡಬೇಕು. ಯುವಕರು ದೇಶದ ಆಸ್ತಿ. ಆದರೆ ಇಂದು ದೇಶದಲ್ಲಿ ಅತೀ ಹೆಚ್ಚು ಶಿಕ್ಷಿತ ನಿರುದ್ಯೋಗಿಗಳಿದ್ದಾರೆ. ದೇಶದ ಯುವಕರು ಹೊಸ ಹುರುಪಿನೊಂದಿಗೆ ತಮ್ಮ ಆಸಕ್ತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯ ಎಂದರು.
ಭಾರತದ ಎಲ್ಲಾ ರಾಜ್ಯಗಳು ಸಮಾನವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಬಲಿಷ್ಠವಾಗಿರುತ್ತದೆ. ಆದರೆ ಇಂದೇನಾಗಿದೆ. ಈಶಾನ್ಯ ಭಾರತದ ಎಂಟು ರಾಜ್ಯಗಳನ್ನು ಹೊರತು ಪಡಿಸಿ ಉಳಿದೆಲ್ಲಾ ರಾಜ್ಯಗಳು ಅಭಿವೃದ್ಧಿ ಹೊಂದುತ್ತಿವೆ. ಈಶಾನ್ಯ ಭಾರತದ ರಾಜ್ಯಗಳ ಕುರಿತಂತೆ ಉಳಿದ ರಾಜ್ಯಗಳು ಯಾವುದೇ ಕಾಳಜಿಯನ್ನು ತೋರಿಸುತ್ತಿಲ್ಲ. ಇದು ವಿಷಾಧದ ಸಂಗತಿ. ಈ ರಾಜ್ಯಗಳು ದುರ್ಬಲವಾಗಿದ್ದರೆ, ದೇಶ ಖಂಡಿತ ದುರ್ಬಲಗೊಳ್ಳುತ್ತದೆ ಎಂದು ಪಿ.ಬಿ.ಆಚಾರ್ಯ ನುಡಿದರು.
ಇಂದು ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಚೀನ ಮಾನ್ಯ ಮಾಡುತ್ತಿಲ್ಲ. ಇದಕ್ಕಾಗಿ ಆಗಾಗ ಕ್ಯಾತೆ ತೆಗೆಯುತ್ತಿದೆ. ಆದರೆ ಈ ಬಗ್ಗೆ ದೇಶದ ಉಳಿದ ಭಾಗದ ಜನರು ಯಾವುದೇ ರೀತಿಯಲ್ಲೂ ಈಶಾನ್ಯ ಭಾಗದ ಜನರೊಂದಿಗೆ ಸ್ಪಂಧಿಸುತ್ತಿಲ್ಲ. ಅವರಿಗೆ ತಾವು ದೇಶದಿಂದ ಪ್ರತ್ಯೇಕವಾಗಿದ್ದೆ ಎಂಬ ಭಾವನೆ ಇದರಿಂದ ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಕಾಡೆಮಿಗೆ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ಇತರ ಹಿರಿಯ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ರಾಜ್ಯಪಾಲರು ಸ್ಮರಣಿಕೆ ನೀಡಿ ಸನ್ಮಾನಿಸಿದರು. ಡಾ.ಎಚ್.ಎಸ್.ಬಲ್ಲಾಳ್, ಡಾ.ಎಚ್.ಶಾಂತರಾಂ, ಎನ್.ವಿ.ಬಲ್ಲಾಳ್, ರುದ್ಫೋರ್ಡ್ ಜೋಸೆಫ್, ಕೆ. ರಮಾನಂದ ಶೆಣೈ, ವಿಠಲ ಪಾಟೀಲ್, ಯು.ದಾಮೋದರ್ ಹಾಗೂ ಇತರರು ಸನ್ಮಾನಿತರಾದರು.
ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಅಧೀನಕ್ಕೊಳಪಟ್ಟ ವಿದ್ಯಾಸಂಸ್ಥೆಗಳ ಹಳೆವಿದ್ಯಾರ್ಥಿಗಳ ಪೋರ್ಟೆಲ್ನ್ನು ರಾಜ್ಯಪಾಲರು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಟಿಎಂಎ ಪೈ ಫೌಂಡೇಷನ್ನ ಕಾರ್ಯದರ್ಶಿ ಟಿ.ಅಶೋಕ್ ಪೈ, ಅಕಾಡೆಮಿಯ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ಎಂಇಎಂಜಿಯ ಅಧ್ಯಕ್ಷ ಡಾ.ರಂಜನ್ ಪೈ, ಕವಿತಾ ಪಿ.ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಹೆ ವಿವಿ ಕುಲಪತಿ ಡಾ.ಎಚ್.ವಿನೋದ್ ಭಟ್ ಸ್ವಾಗತಿಸಿದರೆ, ಅಕಾಡೆಮಿ ಅಧ್ಯಕ್ಷ ಹಾಗೂ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ವೈಸ್ ಚಾನ್ಸಲರ್ ಡಾ.ಜಿ. ಕೆ.ಪ್ರಭು ವಂದಿಸಿದರು. ಡಾ.ಅಪರ್ಣ ರಘು ಕಾರ್ಯಕ್ರಮ ನಿರೂಪಿಸಿದರು.







