ಹನೂರು: ಮೆದೆಗೆ ಆಕಸ್ಮಿಕ ಬೆಂಕಿ
ಹನೂರು,ಜ.4 : ರಾಗಿ ಬೆಳೆಯನ್ನು ಕಟಾವು ಮಾಡಿ ಜಮೀನಿನಲ್ಲಿ ಹಾಕಲಾಗಿದ್ದ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಮೆದೆ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಕುರಟ್ಟಿ ಹೊಸೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಕೌದಳ್ಳಿ ಗ್ರಾಮದ ಕುರಟ್ಟಿಹೊಸೂರು ಗ್ರಾಮದ ಮಹದೇವಶೆಟ್ಟಿ ಎಂಬವರು ಮುನಿರಾಜು ಎಂಬವರಿಗೆ ಸೇರಿದ ಸರ್ವೇ ನಂಬರ್ 57ರಲ್ಲಿ 4.65 ಎಕರೆ ಜಮೀನನ್ನು ಗುತ್ತಿಗೆ ಪಡೆದು ರಾಗಿ ಬೆಳೆಯನ್ನು ಬೆಳೆದಿದ್ದರು. ಕಳೆದ ವಾರ ರಾಗಿ ಬೆಳೆಯನ್ನು ಕಟಾವು ಮಾಡಿ ಜಮೀನಿನಲ್ಲಿ ಮೆದೆ ಹಾಕಿದ್ದರು. ಬುಧವಾರ ತಡರಾತ್ರಿ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಇದನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಬಳಿಕ ಬೆಂಕಿ ನಂದಿಸಲು ಮುಂದಾದರು. ಆದರೂ ಮೆದೆಯು ಸಂಪೂರ್ಣ ಭಸ್ಮಗೊಂಡಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.
ಪರಿಹಾರಕ್ಕೆ ಒತ್ತಾಯ: ಈ ಬಾರಿ ರಾಗಿ ಬೆಳೆಯು ಉತ್ತಮವಾಗಿ ಬಂದಿದ್ದು, ಕಟಾವು ಮಾಡಿ ಜಮೀನಿನಲ್ಲಿ ಮೆದೆ ಹಾಕಲಾಗಿತ್ತು. ಆದರೆ ಆಕಸ್ಮಿಕ ಬೆಂಕಿ ತಗುಲಿ ಮೆದೆ ಸಂಪೂರ್ಣ ಭಸ್ಮಗೊಂಡಿದೆ. ಇದರಿಂದ ಸುಮಾರು 70 ಕ್ಷಿಂಟಾಲ್ ರಾಗಿ ನಷ್ಟವಾಗಿದೆ. ಆದುದರಿಂದ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ಮಹದೇವಶೆಟ್ಟಿ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.