ಮೇವುಹಗರಣ: ಜೈಲಿನಲ್ಲಿ ‘ಚಳಿ ಆಗುತ್ತಿದೆ’ ಎಂದ ಲಾಲೂ ಪ್ರಸಾದ್

ರಾಂಚಿ, ಜ.4: ಪರಿಸ್ಥಿತಿ ಎಷ್ಟೇ ಗಂಭೀರವಾಗಿರಲಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಅಲ್ಲಿದ್ದಾರೆಂದರೆ ಅಲ್ಲಿ ಹಾಸ್ಯೋಕ್ತಿಗಳಿಗೆ ಬರವಿಲ್ಲ. ರಾಂಚಿಯ ವಿಶೇಷ ನ್ಯಾಯಾಲಯದಲ್ಲಿ ಇಂತಹ ಒಂದು ಘಟನೆ ಗುರುವಾರ ನಡೆಯಿತು.
ಮೇವುಹಗರಣಕ್ಕೆ ಸಂಬಂಧಿಸಿ ರಾಂಚಿಯ ವಿಶೇಷ ನ್ಯಾಯಾಲಯ ಲಾಲೂಪ್ರಸಾದ್ರಿಗೆ ಶಿಕ್ಷೆಯ ಪ್ರಮಾಣ ನಿರ್ಧರಿಸಲು ಕಲಾಪಗಳನ್ನು ಆರಂಭಿಸಿತ್ತು. ಆಗ ಅಲ್ಲಿ ಉಪಸ್ಥಿತರಿದ್ದ ಯಾದವ್- ಜೈಲಲ್ಲಿ ತುಂಬಾ ಚಳಿ ಆಗುತ್ತಿದೆ ಎಂದು ನ್ಯಾಯಾಧೀಶರಿಗೆ ಹೇಳಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವಿಶೇಷ ನ್ಯಾಯಾಲದ ನ್ಯಾಯಾಧೀಶ ಶಿವ್ಪಾಲ್ ಸಿಂಗ್- ಹಾಗಿದ್ದರೆ ತಬಲಾ ಬಾರಿಸಿ- ಎಂದು ಉತ್ತರಿಸಿದರು. ಬಳಿಕ ಕಾರ್ಯಕಲಾಪದ ಮಧ್ಯೆ ನ್ಯಾಯಾಧೀಶರು, ತಾನು ಈ ಪ್ರಕರಣದ (ಮೇವುಹಗರಣದ) ದಾಖಲೆ ಪರಿಶೀಲಿಸಿದ್ದೇನೆ. ಸರಕಾರ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದರು. ಮುಖ್ಯಮಂತ್ರಿಯಾಗಿದ್ದ ನೀವು ಸೂಕ್ತವಾಗಿ ನಡೆದುಕೊಳ್ಳಲಿಲ್ಲ ಎಂದು ಲಾಲೂ ಪ್ರಸಾದ್ರನ್ನುದ್ದೇಶಿಸಿ ನ್ಯಾಯಾಧೀಶರು ಹೇಳಿದರು.
ಆಗ ತನ್ನ ಎಂದಿನ ವಿಶಿಷ್ಟವಾದ ಶೈಲಿಯ ನಗೆ ಬೀರಿದ ಲಾಲೂ ಪ್ರಸಾದ್, ನಾನೂ ಕೂಡಾ ಓರ್ವ ವಕೀಲ ಎಂದುತ್ತರಿಸಿದರು. ಲಾಲೂಪ್ರಸಾದ್ ಪಾಟ್ನ ವಿವಿಯಿಂದ ಎಲ್ಎಲ್ಬಿ ಪದವಿ ಪಡೆದಿದ್ದಾರೆ.
ಆರ್ಜೆಡಿ ಮುಖ್ಯಸ್ಥ ರಘುವಂಶ ಯಾದವ್, ಲಾಲೂಪ್ರಸಾದ್ ಪುತ್ರ ತೇಜಸ್ವಿ ಯಾದವ್, ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹಾಗೂ ಆರ್ಜೆಡಿ ಮುಖಂಡ ಶಿವಾನಂದ್ ತಿವಾರಿ ವಿರುದ್ಧ ನ್ಯಾಯಾಂಗನಿಂದನೆ ನೋಟಿಸ್ ಜಾರಿಯಾಗಿರುವುದನ್ನು ನ್ಯಾಯಾಧೀಶರು ಲಾಲೂಪ್ರಸಾದ್ ಗಮನಕ್ಕೆ ತಂದರು. ಆಗ ನೋಟೀಸನ್ನು ರದ್ದುಗೊಳಿಸುವಂತೆ ಲಾಲೂಪ್ರಸಾದ್ ಕೋರಿಕೊಂಡರು. ಲಾಲೂರನ್ನು ನ್ಯಾಯಾಲಯದ ಕೋಣೆಯಿಂದ ಹೊರಗೆ ಕರೆದೊಯ್ಯುವಾಗ ‘ಶಾಂತಚಿತ್ತರಾಗಿ’ ಯೋಚಿಸಿ ನಿರ್ಧರಿಸುವಂತೆ ಲಾಲೂಪ್ರಸಾದ್ ನ್ಯಾಯಾಧೀಶರನ್ನು ಒತ್ತಾಯಿಸಿದರು.
ಶಿಕ್ಷೆಯ ಪ್ರಮಾಣವನ್ನು ಜ.5ರಂದು ಘೋಷಿಸಲಿದ್ದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಾದ ವಿವಾದ ಆಲಿಸುವ ಆಯ್ಕೆ ತನ್ನ ಎದುರಿದೆ ಎಂದು ನ್ಯಾಯಾಧೀಶರು ತಿಳಿಸಿದಾಗ, ವೈಯಕ್ತಿಕವಾಗಿ ಹಾಜರಿದ್ದು ವಿಚಾರಣೆ ನಡೆಸುವಂತೆ ಲಾಲೂ ಕೋರಿದರು.







