ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸು ಏರಿಕೆ ಕುರಿತಾದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಸಿದ್ದರಾಮಯ್ಯ
![ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸು ಏರಿಕೆ ಕುರಿತಾದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಸಿದ್ದರಾಮಯ್ಯ ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸು ಏರಿಕೆ ಕುರಿತಾದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಸಿದ್ದರಾಮಯ್ಯ](https://www.varthabharati.in/sites/default/files/images/articles/2018/01/5/cm speech.jpg)
ಮೂಡಿಗೆರೆ, ಜ.5: ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು ಏರಿಕೆ ಮಾಡುವ ಯಾವುದೇ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಶುಕ್ರವಾರ ಸರಕಾರದ ವಿವಿಧ ಯೋಜನೆಗಳ ಕಾಮಗಾರಿಗಳ ಉಧ್ಘಾಟನೆ ನಿಮಿತ್ತ ಆಗಮಿಸಿದ ಸಮಯದಲ್ಲಿ ಮೂಡಿಗೆರೆ ಪಟ್ಟಣದ ಒಕ್ಕಲಿಗರ ಸಂಘದ ಶಾಲೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಹದಾಯಿ ಸಮಸ್ಯೆ ಬಗೆಹರಿಸಲು ಪ್ರಧಾನಿಗೆ ಮದ್ಯಸ್ಥಿಕೆ ವಹಿಸಿ ಸಭೆ ಕರೆಯುವಂತೆ ಪತ್ರ ಬರೆದು 15 ದಿನಗಳು ಕಳೆದರು ಈವರೆಗೂ ಪ್ರತಿಕ್ರಿಯೆ ಬಂದಿಲ್ಲ. ಸಭೆ ಕರೆಯುವ ವಿಚಾರವನ್ನು ಬಿಟ್ಟು ಬೇರೆಲ್ಲಾ ಮಾತನಾಡುತ್ತಿದ್ದಾರೆ. ಸಭೆ ಕರೆದರೆ ಟ್ರಿಬ್ಯುನಲ್ ಕಂಟೆನ್ಸ್ ಗೆ ತೊಂದರೆಯಾಗುತ್ತದೆ. ಗೋವಾದ ಮುಖ್ಯಮಂತ್ರಿ ಪರಿಕ್ಕರ್ ಈ ವಿಚಾರದಲ್ಲಿ ಒಟ್ಟಾರೆಯಾಗಿ ನಾಟಕ ಮಾಡುತ್ತಿದ್ದಾರೆ ಎಂದರು.
ನಿಜವಾಗಿ ನಿದ್ರೆ ಮಾಡುವವರನ್ನು ಎಚ್ಚರಿಸಬಹುದು. ಆದರೆ ನಿದ್ರೆ ಮಾಡುತ್ತಿರುವಂತೆ ನಟಿಸುತ್ತಿರುವ ಬಿಜೆಪಿಗರನ್ನು ಎಬ್ಬಿಸಲು ಸಾದ್ಯವಿಲ್ಲ. ಕಾಟಿಪಳ್ಳದ ದೀಪಕ್ ರಾವ್ ಸಾವಿನ ಬಗ್ಗೆ ನೋವಿದೆ. ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುತ್ತೇವೆ. ಅವರ ಸಾವಿಗೆ ಸೂಕ್ತ ಪರಿಹಾರ ನೀಡುವ ಕ್ರಮವನ್ನು ಸರಕಾರ ಕೈಗೊಂಡಿದೆ. ಈ ಎಲ್ಲವನ್ನು ಬಿಟ್ಟು ಬಿಜೆಪಿಯವರು ‘ಹಿಂದುಗಳ ಹತ್ಯೆ’ ಎಂದು ಪ್ರತಿಭಟನೆ ಮಾಡಿ ಶಾಂತಿ ಕದಡಲು ಯತ್ನಿಸುತ್ತಿರುವುದು ಸರಿಯಲ್ಲ. ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸುವ ಬಜರಂಗದಳ, ವಿಎಚ್ಪಿ ಶ್ರೀರಾಮಸೇನೆ, ಪಿಎಫ್ಐ ಸೇರಿದಂತೆ ಯಾವುದೇ ಸಂಘಟನೆಗಳು ಪ್ರಯತ್ನಿಸಿದರೂ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಂದಿರುವ ಗೋಧಿ ಕಾಳ ಸಂತೆಕೋರರ ಪಾಲಾಗುತ್ತಿದೆ ಮತ್ತು ಸಮರ್ಪಕ ಪಡಿತರ ಫಲಾನುಭವಿಗಳಿಗೆ ವಿತರಣೆಯಾಗುತ್ತಿಲ್ಲ. ಗೋದಿಯನ್ನು ರಾಜ್ಯಕ್ಕೆ ಕಳಿಸದಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪ ನೀಡಿರುವ ಆರೋಪಕ್ಕೆ ಪತಿಕ್ರಿಯಿಸಿದ ಅವರು, ಕೇಂದ್ರ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ನಡೆದುಕೊಳ್ಳಬೇಕಾಗುತ್ತದೆ. ಯಡಿಯೂರಪ್ಪ ಬರೆಯುವ ಪತ್ರದಿಂದ ಏನೂ ಆಗುವುದಿಲ್ಲ ಎಂದು ಖಾರವಾಗಿ ನುಡಿದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಸ್ವಚ್ಚ ಮತ್ತು ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಬಗ್ಗೆ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿಕೆ ನೀಡಿರುವ ಪ್ರಶ್ನೆಗೆ ಪ್ರತಿಕ್ರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನ ಬುದ್ದಿವಂತರಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಸಂಪುಟದ 7/8 ಮಂದಿ ಬ್ಲೂಫಿಲಂ ನೋಡಿರುವ ಆರೋಪ ಹೊತ್ತಿದ್ದಾರೆ. ಅಧಿಕಾರ ನೀಡಿದಾಗ ಇವರು ಏನು ಮಾಡಿದರು ಎಂಬುದನ್ನು ಜನರು ಯೋಚಿಸುತ್ತಾರೆಯೇ ವಿನಃ ಮುಂದೆ ಅಧಿಕಾರ ನೀಡಿದರೆ ಏನು ಮಾಡುತ್ತಾರೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದು ತಿರುಗೇಟು ನೀಡಿದರು.
ನಾವು ನುಡಿದಂತೆ ನಡೆದಿದ್ದೇವೆ. ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಜನತೆ ನಿರೀಕ್ಷೆಗೂ ಮೀರಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಸವ್ಯಕ್ತಪಡಿಸಿದರು.
ಸಚಿವ ರೋಷನ್ ಬೇಗ್, ಡಾ. ವಿಜಯಕುಮಾರ್, ಮೋಟಮ್ಮ, ಎ.ಎನ್.ಮಹೇಶ್ ಇನ್ನಿತರರರು ಉಪಸ್ಥಿತರಿದ್ದರು.