ಮೂಡಿಗೆರೆ ತಾಲೂಕಿನಲ್ಲಿ 91 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ
![ಮೂಡಿಗೆರೆ ತಾಲೂಕಿನಲ್ಲಿ 91 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ ಮೂಡಿಗೆರೆ ತಾಲೂಕಿನಲ್ಲಿ 91 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ](https://www.varthabharati.in/sites/default/files/images/articles/2018/01/5/batan ottuttiruvudu cm.jpg)
ಮೂಡಿಗೆರೆ, ಜ.4: ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು. ಯಾವುದೇ ತೊಂದರೆ ಮಾಡುವುದಿಲ್ಲ. ಮೂಡಿಗೆರೆ ತಾಲೂಕಿನಲ್ಲಿ 91 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉಧ್ಘಾಟನಾ ಕಾರ್ಯಕ್ರಮವನ್ನು ಬಟನ್ ಒತ್ತುವ ಮೂಲಕ ಉಧ್ಘಾಟಿಸಿ ಮಾತನಾಡಿದರು. ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳಲ್ಲಿ 155 ಭರವಸೆಗಳನ್ನು ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಈಡೇರಿಸಿದ್ದೇವೆ. ಫೆ.26ರಂದು 6ನೇ ಬಜೇಟ್ ಮಂಡಿಸುವ ಮೂಲಕ ಇನ್ನಷ್ಟು ಭರವಸೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಧರ್ಮ, ಜಾತಿ, ಪಕ್ಷಗಳ ಆಧಾರದಲ್ಲಿ ಅಭಿವೃದ್ದಿ ಸಾಧ್ಯವಿಲ್ಲ. ನಮ್ಮ ಆಡಳಿತ ಜನತೆಗೆ ಕೊಟ್ಟಿರುವಂತ ಮಾತು ಮತ್ತು ನಾವು ಮಾಡಿರುವ ಪ್ರತಿಜ್ಷೆಗೆ ತಕ್ಕಂತಿರಬೇಕು. ಜಾತಿ, ರಾಗ, ದ್ವೇಷ ರಹಿತ ಅಧಿಕಾರ ನಡೆಸುವುದಾಗಿ ಪ್ರತಿಜ್ಞೆ ಮಾಡಿದಂತೆ ನಡೆದುಕೊಳ್ಳಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಬೇಕು. ಕೆಲವರನ್ನು ಬಿಟ್ಟು ಸಬ್ ಕಾ ಸಾಥ್ ಅಗುವುದಿಲ್ಲ. ಯಾವುದೇ ಕಾರಣಕ್ಕೂ ಜನರನ್ನು ಧರ್ಮದ, ಜಾತಿಯ ಹೆಸರಲ್ಲಿ ಒಡೆಯುವ ಕೆಲಸ ನಡೆಯಬಾರದು. ಅದು ನಮ್ಮ ಬದ್ದತೆ. ಅದನ್ನು ನಾವು ನಡೆಸುತ್ತಿದ್ದೇವೆ ಎಂದರು.
ಡಿ.6ರಿಂದ ನಿರಂತರವಾಗಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ಕೊಟ್ಟು ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉಧ್ಘಾಟನೆ ಮಾಡುತ್ತಿದ್ದೇನೆ. ಇದು 21ನೇ ಜಿಲ್ಲೆ. ಸಿದ್ದರಾಮಯ್ಯ ಸರಕಾರ ಖರ್ಚಿನಲ್ಲಿ ಶಂಕುಸ್ಥಾಪನೆ, ಉಧ್ಘಾಟನೆ ಮಾಡುತ್ತಿದ್ದಾರೆ ಎಂದು ಬಿಜೆಪಿಗರು ನನ್ನ ಈ ಪ್ರವಾಸವನ್ನು ಟೀಕಿಸುತ್ತಿದ್ದಾರೆ. ಸರಕಾರಿ ಕಾರ್ಯಕ್ರಮವನ್ನು ಸರಕಾರಿ ಖರ್ಚಿನಲ್ಲೆ ಮಾಡಬಾರದೆ ಎಂದು ಪ್ರಶ್ನಿಸಿದ ಅವರು, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದರು ಅಂತಾರಲ್ಲ. ಮೋಟಮ್ಮ ಮನೆಗೆ ಹೋದಾಗ ಅವರು ಬೆಳ್ಳಿ ಲೋಟದಲ್ಲಿ ಕಾಫಿ ಕೊಟ್ರೆ ಕುಡಿಬಾರದಾ ಎಂದು ನಗೆ ಚಟಾಕಿ ಹಾರಿಸಿದರು.
ಎಲ್ಲಾ ಪಕ್ಷಗಳ ಶಾಸಕರ ಕ್ಷೇತ್ರಗಳಿಗೂ ಹೋಗುತ್ತಿದ್ದೇನೆ. ನಮ್ಮ ಪಕ್ಷದ ಶಾಸಕರು ಇದ್ದಲ್ಲಿಗೆ ಮಾತ್ರವಲ್ಲ. ನಮ್ಮ ಸರಕಾರ ಮಾಡಿದ ಕೆಲಸಗಳನ್ನು ಹೇಳಲು ನಾವು ಹೋಗುತ್ತೇನೆ. ಈಡೇರಿಸಿದ್ದನ್ನು, ಈಡೇರಿಸಲಾಗದ್ದನ್ನು ಹೇಳಬೇಕಲ್ಲ ಎಂದ ಅವರು, 700/ 800 ಕೋಟಿ ರೂ.ಗಳ ಅನುದಾನವನ್ನು ಕ್ಷೇತ್ರಕ್ಕೆ ನಿಂಗಯ್ಯ ಕೇಳಿದಾಗ ಕೊಟ್ಟದ್ದೇನೆ. ಮೋಟಮ್ಮ ಕೇಳಿದಾಗಲೂ, ಮತ್ತೊಬ್ಬರು ಕೇಳಿದಾಗಲೂ ಕೊಟ್ಟಿದ್ದೇನೆ. ಅಭಿವೃದ್ದಿ ವಿಚಾರದಲ್ಲಿ ನಮ್ಮ ಸರಕಾರ ತಾರತಮ್ಯ ಮಾಡಲ್ಲ. ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕು. ಕರ್ನಾಟಕದ ಆರೂವರೆ ಕೋಟಿ ಜನರೂ ಅಭಿವೃದ್ದಿಯಾಗಬೇಕು ಎಂದು ತಿಳಿಸಿದರು.
ಬಜೆಟ್ ಸಿದ್ದಪಡಿಸುವಾಗ ಸಮಾಜದ ಕಟ್ಟ ಕಡೆಯ ನಾಗರಿಕ ಕಣ್ಣ ಮುಂದೆ ಕಾಣಿಸುತ್ತಾನೆ. ದೇವರಾಜ ಅರಸರ ನಂತರ 5 ವರ್ಷ ಮುಖ್ಯಮಂತ್ರಿಯಾಗಿ ಅವಧಿ ಮುಗಿಸಲು ಯಾರಿಗೂ ಅವಕಾಶ ಸಿಕ್ಕಿಲ್ಲ. ನನಗೆ 5 ವರ್ಷ ತುಂಬಿಸುವ ಅವಕಾಶ ಸಿಕ್ಕಿದೆ. ಮುಂದಿನ ಸಲ ನಮಗೇ ಜನ ಆಶಿರ್ವಾದ ಮಾಡುತ್ತಾರೆ. ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಜನ ಅನ್ನ, ಹಾಲು, ಶಿಕ್ಷಣ, ಸಾಲ ಮನ್ನಾ ಮಾಡಿದವರನ್ನು ಮರೆಯಲ್ಲ. ಇದು ಬಸವಣ್ಣ, ಕನಕದಾಸ, ಶಿಶುನಾಳ ಶರೀಪರ ನಾಡು. ಇಲ್ಲಿ ತಂತ್ರ-ಜಾದು ಮಾಡಕಾಗಲ್ಲ. ನಾವು ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಜನರ ನಿರೀಕ್ಷೆಗೆ ತಕ್ಕಂತೆ ನಾವು ಆಡಳಿತ ಮಾಡಿದ್ದೇವೆ ಎಂದು ಹೇಳಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಶಾಧಿ ಭಾಗ್ಯ, ಶೂ ಭಾಗ್ಯ, ಮೈತ್ರೇಯಿ, ಮನಸ್ವಿನಿ, ಸಾಲಮನ್ನಾ, ಅನಿಲಭಾಗ್ಯ ಮಾತೃಪೂರ್ಣ, ಚುನಾವಣಾ ಪ್ರನಾಳಿಕೆಯಲ್ಲಿ ಹೇಳದ ಅನೇಕ ಯೋಜನೆ ಜಾರಿಗೊಳಿಸಿದ್ದೇವೆ. ಕಾಫಿ ಬೆಳಗಾರರಿಗೆ ಪ್ಯಾಕೇಜ್ ಕೊಟ್ಟಿದ್ದೇವೆ.
ರಾಜ್ಯದಲ್ಲಿ ರೈತರ ನಮೇಲಿರುವ ಅಲ್ಪಾವಧಿ ಸಾಲ 52 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾಗೊಳಿಸಲು ಒತ್ತಾಯಿಸಿ ಪ್ರಧಾನಿ ಬಳಿ ಸರ್ವ ಪಕ್ಷ ನಿಯೋಗ ತೆರಳಿದ್ದೆವು. ಪ್ರಧಾನಿ ಸಾಲ ಮನ್ನಾಗೊಳಿಸಲು ಒಪ್ಪಲಿಲ್ಲ.
‘ನಾವು ಕೊಟ್ಟ ಮಾತಿನಂತೆ 50 ಸಾವಿರ ರೂ.ಗಳಂತೆ ರೈತರು ಮಾಡಿದ್ದ 8165 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದ್ದೇವೆ. ಕೇಂದ್ರಕ್ಕೆ ರಾಷ್ಟ್ರೀಕೃತ ಮತ್ತು ಷೆಡ್ಯೂಲ್ಡ್ ಬ್ಯಾಂಕುಗಳಲ್ಲಿರುವ 42 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಲು ಪತ್ರ ಬರೆಯುತ್ತಲೇ ಇದ್ದೇವೆ. ಆದರೆ ಅವರು ಮಾಡುತ್ತಿಲ್ಲ. ಮನ್ಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದರು. ಹಾಗೆಯೇ ನೀವು ಮಾಡಿ ಅನ್ನುವುದು ತಪ್ಪಾ?’
-ಸಿದ್ದರಾಮಯ್ಯ, ಮುಖ್ಯಮಂತ್ರಿ.