ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ಪಡೆಯಲು ಸರಕಾರ ವಿಫಲ
ಚಳಿಗಾಲದ ಅಧಿವೇಶನ ಅಂತ್ಯ
ಹೊಸದಿಲ್ಲಿ, ಜ.5: ರಾಜ್ಯಸಭೆಯ ಕಲಾಪವನ್ನು ಮುಂದೂಡುವುದರೊಂದಿಗೆ ಚಳಿಗಾಲದ ಅಧಿವೇಶನ ಅಂತ್ಯಗೊಂಡಿದ್ದು ತ್ರಿವಳಿ ತಲಾಖ್ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲು ಸರಕಾರ ವಿಫಲಗೊಂಡಿದೆ.
ಇದೀಗ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ಪಡೆಯಲು ಸರಕಾರ ಪ್ರಯತ್ನಿಸಬೇಕಿದೆ. ಚಳಿಗಾಲದ ಅಧಿವೇಶನದಲ್ಲೇ ಮಸೂದೆಗೆ ಅನುಮೋದನೆ ಪಡೆಯುವ ಪ್ರಯತ್ನ ನಡೆಸಿದ್ದ ಬಿಜೆಪಿ, ಸದನದಲ್ಲಿ ಹಾಜರಿರುವಂತೆ ಪಕ್ಷದ ಸದಸ್ಯರಿಗೆ ವಿಪ್ ಜಾರಿಮಾಡಿತ್ತು. ರಾಜ್ಯಸಭೆಯ ಅಜೆಂಡಾದಲ್ಲಿ ಮಸೂದೆಯನ್ನು ಸೇರಿಸಲಾಗಿದ್ದರೂ ಸರಕಾರ ಮತ್ತು ವಿಪಕ್ಷಗಳ ನಡುವಿನ ಬಿಕ್ಕಟ್ಟು ಮುಂದುವರಿದ ಕಾರಣ ಮಸೂದೆಗೆ ಅನುಮೋದನೆ ಪಡೆಯಲು ಸಾಧ್ಯವಾಗಲಿಲ್ಲ.
ತ್ರಿವಳಿ ತಲಾಖ್ ಮಸೂದೆಗೆ ಕಳೆದ ವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದರೂ ರಾಜ್ಯಸಭೆಯಲ್ಲಿ ಸರಕಾರಕ್ಕೆ ಬಹುಮತದ ಕೊರತೆಯಿತ್ತು. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ಮನವೊಲಿಕೆಗೆ ಸರಕಾರ ಮುಂದಾಗಿತ್ತು. ಆದರೆ ಮಸೂದೆಯನ್ನು ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಪಟ್ಟುಹಿಡಿದವು. ಸುಪ್ರೀಂಕೋರ್ಟ್ನ ಆದೇಶದ ಹೊರತಾಗಿಯೂ ತ್ರಿವಳಿ ತಲಾಖ್ ಪದ್ಧತಿ ಮುಂದುವರಿದಿರುವ ಕಾರಣ ಮಸೂದೆ ಜಾರಿಗೊಳ್ಳುವ ಅನಿವಾರ್ಯತೆಯಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸಂಸದರಲ್ಲಿ ಮನವಿ ಮಾಡಿಕೊಂಡರು.
ಆದರೆ, ಮಸೂದೆಯಲ್ಲಿ ಪ್ರಸ್ತಾವಿಸಲಾಗಿರುವ ಮೂರು ವರ್ಷದ ಜೈಲುಶಿಕ್ಷೆ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಈ ಮಸೂದೆಯನ್ನು ಅಂಗೀಕರಿಸುವ ಮುನ್ನ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದವು. ರಾಜ್ಯಸಭೆಯಲ್ಲಿ ಸರಕಾರದ ಪರ ನಿಲ್ಲುವ ಬಿಜೆಪಿಯ ಮಿತ್ರಪಕ್ಷಗಳಾದ ತೆಲುಗುದೇಶಂ, ಎಐಎಡಿಎಂಕೆ, ಬಿಜು ಜನತಾದಳ ಪಕ್ಷಗಳು ಕೂಡಾ ಮಸೂದೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ವಿಪಕ್ಷಗಳ ಬೇಡಿಕೆಗೆ ಧ್ವನಿಗೂಡಿಸಿರುವುದು ಗಮನಾರ್ಹವಾಗಿದೆ.
ತ್ರಿವಳಿ ತಲಾಖ್ ನೀಡುವ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸುವ ಹೊರತಾಗಿ, ಆತನಿಗೆ ದಂಡ ವಿಧಿಸುವ ಆಯ್ಕೆಯೂ ಇರಬೇಕು ಎಂಬುದು ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ಅಲ್ಲದೆ ಈಗಿನ ಸ್ಥಿತಿಯಲ್ಲಿ ಮಸೂದೆ ಜಾರಿಯಾದರೆ ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಯಾರು ಬೇಕಾದರೂ ದೂರು ನೀಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸುವಂತೆ ಮಾಡಬಹುದಾಗಿದೆ ಎಂದು ವಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಆದರೆ ಮಸೂದೆಯನ್ನು ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂಬ ವಿಪಕ್ಷಗಳ ಆಗ್ರಹಕ್ಕೆ ಸರಕಾರ ನಿರಾಕರಿಸಿದೆ. ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿರುವ ಸರಕಾರ, ರಾಜ್ಯಸಭೆಯಲ್ಲಿ ಮಸೂದೆಯ ಬಗ್ಗೆ ಚರ್ಚೆಗೆ ಸಿದ್ಧ ಎಂದು ತಿಳಿಸಿದೆ. ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿದ ಕಾಂಗ್ರೆಸ್ ರಾಜ್ಯಸಭೆಯಲ್ಲಿ ವಿರೋಧಿಸುವ ಮೂಲಕ ಬೂಟಾಟಿಕೆ ತೋರುತ್ತಿದೆ ಎಂದು ಸರಕಾರ ಟೀಕಿಸಿದೆ. ಸದನದಲ್ಲಿ ಚರ್ಚೆ ಮಾಡುವ ಮೂಲಕ ಯಾವುದೇ ಆತಂಕವನ್ನು ಪರಿಹರಿಸಲು ಸಾಧ್ಯವಿದೆ ಎಂದು ಹೇಳಿರುವ ಬಿಜೆಪಿ, ಮುಸ್ಲಿಂ ಮಹಿಳೆಯರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ ಬಯಸುವುದಿಲ್ಲ. ಸಂಸದೀಯ ಸಮಿತಿ ಎಂಬ ನೆಪಹುಡುಕಿ ಅಡಗಿ ಕೂರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಇತಿಹಾಸದಿಂದ ಪಾಠ ಕಲಿಯಬೇಕಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ಕುಮಾರ್ ಹೇಳಿದ್ದಾರೆ.
ಮುಸ್ಲಿಮ್ ಮಹಿಳೆಯರ ಹಕ್ಕನ್ನು ಅಪಹರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಶಾ ಬಾನೊ ಪ್ರಕರಣದಲ್ಲೂ ಕಾಂಗ್ರೆಸ್ ಇದೇ ರೀತಿ ನಡೆದುಕೊಂಡಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಟೀಕಿಸಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಮಸೂದೆಯ ಬಗ್ಗೆ ಒಮ್ಮತಾಭಿಪ್ರಾಯ ಮೂಡಿಸುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಮುಂದಿನ ಬಜೆಟ್ ಅಧಿವೇಶನದಲ್ಲಿ ಸಹಮತ ರೂಪಿಸುವ ವಿಶ್ವಾಸವನ್ನು ಬಿಜೆಪಿ ಮೂಲಗಳು ವ್ಯಕ್ತಪಡಿಸಿವೆ.