ತನ್ನ ವಿವಾಹ ನಡೆಸಿದವರ ವಿರುದ್ಧವೇ ದೂರು ನೀಡಿದ ಯುವಕ !
ಪಾಟ್ನ, ಜ.5: 29ರ ಹರೆಯದ ವ್ಯಕ್ತಿಯೋರ್ವನನ್ನು ಅಪಹರಿಸಿ ಆತನಿಗೆ ಬಲವಂತವಾಗಿ ವಿವಾಹ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದ್ದು ಪ್ರಕರಣದ ವೀಡಿಯೊ ದೃಶ್ಯಾವಳಿ ಸ್ಥಳೀಯ ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದೆ.
ಬೊಕಾರೊ ಸ್ಟೀಲ್ ಸಂಸ್ಥೆಯಲ್ಲಿ ಕಿರಿಯ ಇಂಜಿನಿಯರ್ ಆಗಿರುವ ವಿನೋದ್ ಕುಮಾರ್ ಎಂಬಾತನನ್ನು ಅಪಹರಿಸಿ ಆತನಿಗೆ ಹಲ್ಲೆ ನಡೆಸಿ ಬಲವಂತವಾಗಿ ವಿವಾಹ ಮಾಡಲಾಗಿದೆ. ಪಾಟ್ನಾದ ಪಂಡಾರಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಮದುವೆಯಾಗಲು ತನಗೆ ಇಷ್ಟವಿಲ್ಲ, ಬಿಟ್ಟುಬಿಡಿ ಎಂದು ವಿನೋದ್ ಅಂಗಲಾಚುತ್ತಿದ್ದರೆ, ವಧುವಿನ ಕಡೆಯವರು ಎನ್ನಲಾದ ನಾಲ್ಕೈದು ಮಹಿಳೆಯರು ಆತನ ಮನವೊಲಿಸುವ ಪ್ರಯತ್ನ ನಡೆಸುತ್ತಿರುವುದನ್ನು ವೀಡಿಯೊ ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.
ವಧುವಿನ ಹಣೆಗೆ ಕುಂಕುಮ ಇಡಲು ವಿನೋದ್ ನಿರಾಕರಿಸಿದಾಗ ವಧುವಿನ ಬಂಧುಗಳು, ನಾವು ಮಾಡುತ್ತಿರುವುದು ನಿನ್ನ ಮದುವೆ. ನಿನ್ನನ್ನು ನೇಣು ಹಾಕುತ್ತಿಲ್ಲ ಎಂದು ಧಮಕಿ ಹಾಕಿದ್ದರು.
ಸ್ನೇಹಿತನ ವಿವಾಹ ಸಮಾರಂಭದಲ್ಲಿ ತಾನು ಪಾಲ್ಗೊಂಡಿದ್ದಾಗ ಯುವತಿಯೊಬ್ಬಳ ಪರಿಚಯವಾಗಿದೆ. ಬಳಿಕ ಆಕೆಯ ಕಡೆಯವರು ತನ್ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ವಿನೋದ್ ದೂರಿದ್ದಾನೆ.
ಡಿಸೆಂಬರ್ 3ರಂದು ಪಾಟ್ನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಿನೋದ್ ಪಾಲ್ಗೊಂಡಿದ್ದು ಅಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿದೆ. ಬಳಿಕ ಹುಡುಗಿಯ ಸೋದರ ಸುರೇಂದ್ರ ಯಾದವ್ ಎಂಬಾತ ಮೊಕಾಮ ಎಂಬಲ್ಲಿಗೆ ಬರುವಂತೆ ವಿನೋದ್ನ ಮನವೊಲಿಸಿ, ಅಲ್ಲಿಂದ ಅಪಹರಿಸಿ ಪಂಡಾರಕ್ಗೆ ಕೊಂಡೊಯ್ದು ಅಲ್ಲಿ ಬಲವಂತ ವಿವಾಹ ನೆರವೇರಿಸಲಾಗಿದೆ ಎಂದು ವಿನೋದ್ ಸೋದರ ಸಂಜಯ್ ಸುದ್ದಿಸಂಸ್ಥೆಗೆ ತಿಳಿಸಿದ್ದಾನೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ಆತ ದೂರಿದ್ದಾನೆ.
ಆದರೆ ಇದನ್ನು ನಿರಾಕರಿಸಿರುವ ಪಂಡಾರಕ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಪ್ರಭಾಕರ್ ವಿಶ್ವಕರ್ಮ, ಅಪಹರಣವಾಗಿದೆ ಎನ್ನಲಾಗಿರುವ ಪ್ರದೇಶ ಮೊಕಾಮ ಗ್ರಾಮಕ್ಕೆ ಸೇರಿರುವ ಕಾರಣ ಮೊಕಾಮ ಠಾಣೆಯಲ್ಲಿ ದೂರು ದಾಖಲಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ಸಂಜಯ್ ಪಾಟ್ನದ ಹಿರಿಯ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದು, ಅವರ ಸೂಚನೆಯಂತೆ ಪಂಡಾರಕ್ ಪೊಲಿಸರು ವಿನೋದ್ನನ್ನು ಗ್ರಾಮವೊಂದರಲ್ಲಿ ಪತ್ತೆಹಚ್ಚಿ ಬಂಧಮುಕ್ತಗೊಳಿಸಿದ್ದಾರೆ.
ಇದರ ಬಳಿಕ ವಿನೋದ್ ಕುಟುಂಬಕ್ಕೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು ಮದುವೆಯಾಗಿರುವ ಹುಡುಗಿಯನ್ನು ಪತ್ನಿ ಎಂದು ಒಪ್ಪಿಕೊಳ್ಳುವಂತೆ ಬಲವಂತ ಮಾಡಲಾಗುತ್ತಿದೆ ಎಂದು ವಿನೋದ್ ಕುಟುಂಬದವರು ದೂರು ನೀಡಿದ್ದಾರೆ.
ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗವುದು ಎಂದು ಪಾಟ್ನಾ ನಗರದ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.