ನಿವೃತ್ತಿ ವಯಸ್ಸು 55ಕ್ಕೆ ಇಳಿಸಲು ಎಂ.ಕೃಷ್ಣಮೂರ್ತಿ ಒತ್ತಾಯ
ಮಂಡ್ಯ, ಜ.6: ನಿರುದ್ಯೋಗ ನಿವಾರಣೆ ಹಿನ್ನೆಲೆಯಲ್ಲಿ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು 55ಕ್ಕೆ ಇಳಿಸುವಂತೆ ಬಿಎಸ್ಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಹೆಚ್ಚುಸುವಂತೆ ಒತ್ತಾಯಿಸುವುದು ಸೂಕ್ತವಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶಾಧ್ಯಂತ ನಿವೃತ್ತಿ ವಯೋಮಿತಿ ಇಳಿಕೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ನೌಕರರ ನಿವೃತ್ತಿ ವಯಸ್ಸು ಏರಿಸುವ ಒತ್ತಡವನ್ನು ಸರಕಾರಕ್ಕೆ ನೀಡುತ್ತಿರವುದು ಮಾನವೀಯ ದೃಷ್ಟಿಯಿಂದ ಸಮಂಜಸವಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ಡಿಸೆಂಬರ್ ಅಂತ್ಯಕ್ಕೆ 25 ಸಾವಿರ ಹುದ್ದೆಗಳು ನಿವೃತ್ತಿಯಿಂದ ಖಾಲಿ ಉಳಿದಿದ್ದು, ಹೊಸ ನೇಮಕಾತಿ ಬಹುಬೇಗ ನಡೆಯಬೇಕು. ನಿವೃತ್ತಿ ವಯಸ್ಸು ಇಳಿಕೆಗೆ ಹೊಸ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತ ಅವಧಿಯಲ್ಲಿ 58 ರಿಂದ 60ಕ್ಕೆ ನಿವೃತ್ತಿ ವಯಸ್ಸನ್ನು ಹೇರಿಸಿ, ನಿರುದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿ ಕೋಟ್ಯಾಂತರ ರೂಗಳನ್ನು ಬೊಕ್ಕಸದಿಂದ ಖಾಲಿ ಮಾಡಿಸಿದ್ದರು. ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ. ಸಿದ್ದರಾಮಯ್ಯ ಸರಕಾರ ಕೂಡಲೆ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿಮಾಡಬೇಕು ಎಂದು ಅವರು ತಾಕೀತು ಮಾಡಿದ್ದಾರೆ.