ಅಣಬೇರು ತಾರೇಶ್ ಅವರ ಕವನ ಸಂಕಲನ ನೆನಪು ಮಾಸುವ ಮುನ್ನ ಕೃತಿ ಬಿಡುಗಡೆ
![ಅಣಬೇರು ತಾರೇಶ್ ಅವರ ಕವನ ಸಂಕಲನ ನೆನಪು ಮಾಸುವ ಮುನ್ನ ಕೃತಿ ಬಿಡುಗಡೆ ಅಣಬೇರು ತಾರೇಶ್ ಅವರ ಕವನ ಸಂಕಲನ ನೆನಪು ಮಾಸುವ ಮುನ್ನ ಕೃತಿ ಬಿಡುಗಡೆ](https://www.varthabharati.in/sites/default/files/images/articles/2018/01/7/2.jpg)
ದಾವಣಗೆರೆ,ಜ.7:ಕವನ ಸಂಕಲನದಿಂದ ಕನ್ನಡ ಸಾಹಿತ್ಯ ಲೋಕವು ಮತ್ತೊಷ್ಟು ಶ್ರೀಮಂತಗೊಳ್ಳುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅಭಿಪ್ರಾಯಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಸಿರಿ ಗನ್ನಡ ವೇದಿಕೆ ಜಿಲ್ಲಾ ಘಟಕ ಮತ್ತು ಭಾವಸಿರಿ ಪ್ರಕಾಶನದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಣಬೇರು ತಾರೇಶ್ ಅವರ ಕವನ ಸಂಕಲನ ನೆನಪು ಮಾಸುವ ಮುನ್ನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಕವನ ಸಂಕಲನಗಳು ಹೆಚ್ಚು ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ವಿಚಾರ. ಈ ಮೂಲಕ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಪ್ರತಿಭೆಗಳು ಆಗಮಿಸುತ್ತಿವೆ. ಇದಕ್ಕೆ ಅಣಬೇರು ತಾರೇಶ್ ಅವರ ಕವನ ಸಂಕಲನ ನೆನಪು ಮಾಸುವ ಮುನ್ನ ಸೇರ್ಪಡೆಗೊಂಡಿರುವುದು ಸಂತೋಷದ ವಿಷಯ ಎಂದರು.
ಕವನಗಳು ಓದುಗನ ಮನಸ್ಸನ್ನು ಅರಳಿಸಿ, ಚಿಂತನೆ ಮತ್ತು ವೈಚಾರಿಕತೆಯ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಇಂಥಹ ಕವನಗಳು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದ ಅನೇಕ ಕವನಗಳಲ್ಲಿ ವಂದೇ ಮಾತರಂ, ರಾಷ್ಟ್ರಗೀತೆಯಾಗಿರುವ ಜನಗಣಮನ ಕೂಡ ಪ್ರಮುಖವಾದವುಗಳು. ನಮ್ಮ ನಾಡಗೀತೆ, ರೈತಗೀತೆ ಕೂಡ ಜಾತಿ,ಮತ ಭೇದಗಳನ್ನು ಮೀರಿದ ಸಾಹಿತ್ಯದ ಪ್ರಕಾರಗಳಾಗಿವೆ. ಇಂಥಹ ಸಾಹಿತ್ಯಗಳನ್ನು ಎಲ್ಲರೂ ಓದಿ ಮನಸ್ಸನ್ನು ಮುದಗೊಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕೃತಿ ಬಿಡುಗಡೆಗೊಳಿಸಿದ ಯುವಸಾಹಿತಿ ತುಮಕೂರಿನ ಖುಷಿ ಕೃಷ್ಣ ಮಾತನಾಡಿ, ಮನುಷ್ಯ ಭ್ರಮೆಗಳಿಂದ ಹೊರಬಂದು ಬದುಕಬೇಕು. ನಮ್ಮ ತನವನ್ನು ನಾವು ತೋರಿಸಿ ಕೊಳ್ಳಬೇಕೆಂದರೆ ನಮ್ಮದೇ ಆದ ಬರಹದ ಮೂಲಕ ಸಾಧನೆ ಮಾಡಬೇಕು. ಸಾಹಿತ್ಯ ರಚನೆಯಲ್ಲಿ ಮತ್ತಾರನ್ನೋ ಅನುಕರಣೆ ಮಾಡದೇ ನಮ್ಮೊಳಗಿರುವ ನಿಜವಾದ ಕವಿಯನ್ನು ನಾಡಿಗೆ ತೋರಿಸಬೇಕು. ನಮ್ಮ ನೆನಪುಗಳು ಮಾಸಿ ಹೋಗುವ ಮುನ್ನ ಏನಾದರೂ ಸಾಧನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರಭದ್ರಪ್ಪ ತೆಲಗಿ, ಡಾ. ವೀರೇಶ್ ಹನಗವಾಡಿ, ಸಾಹಿತಿ ಕೆ.ಎನ್. ಸ್ವಾಮಿ, ರಾಜಶೇಕರ್ ಗುಂಡಗಟ್ಟಿ, ಎಚ್. ಮಲ್ಲಿಕಾರ್ಜುನ್, ಗಂಗಮ್ಮ, ಪರಮೇಶ್ವರಪ್ಪ, ರಾಜಯೋಗಿನಿ ಮಮತಕ್ಕ, ಶಾಂತಕ್ಕ, ಲೋಲಾಕ್ಷಿಅಕ್ಕ ಇದ್ದರು.