ವಿಕಲಚೇತನರ ಬದುಕಿಗೆ ಘನತೆ: ಅಗರ್ವಾಲ್
ಕೃತಕ ಕಾಲು ವಿತರಣೆ

ಬೆಂಗಳೂರು, ಜ. 7: ದುರ್ಬಲ ವರ್ಗದ ವಿಕಲಚೇತನರ ಬದುಕಿಗೆ ಘನತೆ ತಂದುಕೊಡುವ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಮತ್ತು ದೀರ್ಘಬಾಳಿಕೆಯ ಕೃತಕ ಕಾಲುಗಳನ್ನು ವಿತರಿಸುತ್ತಿರುವ ಮಾರವಾಡಿ ಸಮಾಜದ ಕಾರ್ಯ ಅನುಕರಣೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಜಿ.ಅಗರ್ವಾಲ್ ತಿಳಿಸಿದ್ದಾರೆ.
ರವಿವಾರ ಮಾರವಾಡಿ ಸಮಾಜ, ಭಗವಾನ್ ಮಹಾವೀರ್ ಜೈನ್ ವಿಕಲಾಂಗ್ ಸಹಾಯತಾ ಸಮಿತಿ ಸಹಯೋಗದೊಂದಿಗೆ ಉಚಿತ ಜೈಪುರ ಕಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 150ಕ್ಕೂ ಹೆಚ್ಚು ಮಂದಿ ಕೃತಕ ಕಾಲು, ಪೋಲಿಯೋ ಬಾಧಿತರಿಗೆ ‘ಕ್ರಚಸ್’ ನೀಡಲಾಗಿದೆ ಎಂದರು.
ಪ್ರತಿಯೊಂದು ಕಡೆಯೂ ನಾವು ಬಡವರಲ್ಲಿ ಬಡವರ ಪರವಾಗಿ ನಿಲ್ಲುತ್ತಿದ್ದೇವೆ, ಅವರಲ್ಲಿ ಕೆಲವರು ಸಾವಿರಾರು ಮೈಲಿಗಳಿಂದ ಬರುತ್ತಾರೆ. ಅವರಿಗೆ ನಾವು ಕಾಲುಗಳನ್ನು ಮಾತ್ರ ಜೋಡಿಸುತ್ತಿಲ್ಲ. ಘನತೆಯಿಂದ ಬದುಕು ನಡೆಸಲು ನೆರವಾಗುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ನಾವು ಕೊಡುವುದನ್ನೇ ಪಡೆಯುತ್ತೇವೆ’ ಎಂದು ಮಾರವಾಡಿ ಸಮಾಜದ ಪ್ರಾಜೆಕ್ಟ್ ಡೈರೆಕ್ಟರ್ ಬಿಮಲ್ ಕುಮಾರ್ ಸರೋಗಿ ಹೇಳಿದರು.
ಮಾರವಾಡಿ ಸಮಾಜದ ಅಧ್ಯಕ್ಷ ಅನಿಲ್ ಕುಮಾರ್ ಅಲಂಪುರಿಯಾ, ‘ನಮ್ಮ ಸಮಾಜ ಸೇವೆಗಳನ್ನು ಪ್ರತಿ ವರ್ಷ ಮುಂದುವರೆಸಲು ಹೆಮ್ಮೆ ಪಡುತ್ತೇವೆ. ಇದರಿಂದ ಹೆಚ್ಚು ಹೆಚ್ಚು ಜನರು ಪ್ರಯೋಜನ ಪಡೆಯಬಹುದು. ಕೃತಕ ಕಾಲುಗಳನ್ನು ಜೋಡಿಸಿದ ನಂತರ ವಿಕಲಚೇತನರು ಸಾಮಾನ್ಯ ವ್ಯಕ್ತಿಯಂತೆ ನಡೆದಾಡಲು ಅನುಕೂಲ’ ಎಂದರು.







