ಮಹಾರಾಷ್ಟ್ರ ಗಲಭೆಗೆ ಖಂಡನೆ : ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ
![ಮಹಾರಾಷ್ಟ್ರ ಗಲಭೆಗೆ ಖಂಡನೆ : ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ ಮಹಾರಾಷ್ಟ್ರ ಗಲಭೆಗೆ ಖಂಡನೆ : ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ](/images/placeholder.jpg)
ಮಡಿಕೇರಿ,ಜ.7 : ಮಹಾರಾಷ್ಟ್ರದ ದಲಿತ ಸಂಘಟನೆಗಳು ಕೋರೆಗಾಂವ್ 200ನೇ ವರ್ಷಾಚರಣೆಯ ವಿಜಯೋತ್ಸವ ಆಚರಿಸುವ ಸಂದರ್ಭ ಹಿಂದೂಪರ ಸಂಘಟನೆಗಳು ಹಲ್ಲೆ ನಡೆಸಿವೆ ಎಂದು ಆರೋಪಿಸಿ, ಬಹುಜನ ವಿದ್ಯಾರ್ಥಿ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಕಾವೇರಿ ಕಲಾಕ್ಷೇತ್ರದಿಂದ ಪ್ರತಿಭಟನಾ ಜಾಥಾ ನಡೆಸಿದ ಬಹುಜನ ವಿದ್ಯಾರ್ಥಿ ಸಂಘದ ಸದಸ್ಯರು, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ಪ್ರತಿಭಟನೆ ನಡೆಸಿದರಲ್ಲದೆ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್ ಮೌರ್ಯ, ಮಹಾರಾಷ್ಟ್ರದ ಕೋರೆಗಾಂವ್ನಲ್ಲಿ ಕಳೆದ 200 ವರ್ಷಗಳ ಹಿಂದೆ ದಲಿತರು ಹೋರಾಡಿ ಪೇಶ್ವೆ ಸೈನಿಕರನ್ನು ಸೋಲಿಸಿ, ಯುದ್ಧದಲ್ಲಿ ವಿಜಯ ಸಾಧಿಸಿದ್ದರು. ಈ ವಿಜಯೋತ್ಸವವನ್ನು ದಲಿತ ಸಂಘಟನೆಗಳು ಆಚರಿಸಲು ಮುಂದಾದಾಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಬಹುಜನ ವಿದ್ಯಾರ್ಥಿ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ ಮೋಹನ್ ಅವರು, ಸಂಘ ಪರಿವಾರದ ದೌರ್ಜನ್ಯದ ವಿರುದ್ಧ ದಲಿತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಮಾವೇಶಗೊಂಡು “ಕೋರೆಗಾಂವ್ ವಿಜಯೋತ್ಸವಕ್ಕೆ 200 ವರ್ಷಾಚರಣೆ ಮುಂದೇನು” ಎಂಬ ವಿಚಾರ ಸಂಕಿರಣ ನಡೆಯಿತು.
ಜಿಲ್ಲೆಯ ವಿವಿದೆಢೆಗಳಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅಂಬೇಡ್ಕರ್ ತತ್ವ ಚಿಂತನೆಗಳು ಸಂವಿಧಾನ ಹಾಗೂ ಪ್ರಸ್ತುತ ದೇಶದಲ್ಲಿ ದಲಿತರ ಸ್ಥಿತಿಗತಿಗಳ ಕುರಿತು ವಿಷಯ ಮಂಡಿಸಿದರು. ಪ್ರಮುಖರಾದ ಪ್ರೇಮ್ ಕುಮಾರ್, ಕೆ.ಬಿ.ರಾಜು, ಶಿವಪ್ರಸಾದ್, ದೀಪು ಮತ್ತಿತರರು ಪಾಲ್ಗೊಂಡಿದ್ದರು.