ನಾಡು, ನುಡಿ, ಸಂಸ್ಕೃತಿ ರಕ್ಷಣೆಗೆ ಬದ್ಧರಾಗಬೇಕು : ಸುಂಡಹಳ್ಳಿ ಮಹೇಶ್
![ನಾಡು, ನುಡಿ, ಸಂಸ್ಕೃತಿ ರಕ್ಷಣೆಗೆ ಬದ್ಧರಾಗಬೇಕು : ಸುಂಡಹಳ್ಳಿ ಮಹೇಶ್ ನಾಡು, ನುಡಿ, ಸಂಸ್ಕೃತಿ ರಕ್ಷಣೆಗೆ ಬದ್ಧರಾಗಬೇಕು : ಸುಂಡಹಳ್ಳಿ ಮಹೇಶ್](https://www.varthabharati.in/sites/default/files/images/articles/2018/01/7/7MDY-2.jpg)
ಮಂಡ್ಯ, ಜ.7: ಕನ್ನಡ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರೂ ಮಣ್ಣಿನ ಋಣ, ಅನ್ನದ ಋಣ, ನೀರಿನ ಋಣ ತೀರಿಸಬೇಕಾದರೆ ನಾಡು, ನುಡಿ, ಸಂಸ್ಕøತಿ ರಕ್ಷಣೆಗೆ ಬದ್ಧರಾಗಿರಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಸುಂಡಹಳ್ಳಿ ಕರೆ ನೀಡಿದ್ದಾರೆ.
ತಾಲೂಕಿನ ಬಸರಾಳು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2017-18ನೆ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಇಂದು ಆಧುನಿಕತೆಯ ಹೆಸರಿನಲ್ಲಿ ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್ ವ್ಯಾಮೋಹ ಕುಗ್ರಾಮಗಳಲ್ಲೂ ಬೇರೂರುತ್ತಿದೆ. ಇದರ ಹೊಡೆತದಿಂದ ಕನ್ನಡ ನಿತ್ರಾಣವಾಗುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚಿ ಆಂಗ್ಲಶಾಲೆಗಳನ್ನು ಹೆಚ್ಚು ಹೆಚ್ಚು ತೆರೆಯಲಾಗುತ್ತಿದೆ. ಕನ್ನಡ ಶಾಲೆಗಳು ಉಳಿದರೆ ನಮ್ಮ ನಾಡು, ನುಡಿ, ಸಂಸ್ಕೃತಿಯ ರಕ್ಷಣೆಯಾಗುತ್ತದೆ ಎಂದು ಹೇಳಿದರು.
ಅತಿಥಿ ಉಪಪ್ರಾಂಶುಪಾಲ ಡಿ.ಕೃಷ್ಣಪ್ಪ ಮಾತನಾಡಿ, ವರ್ಷಪೂರ್ತಿ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಇನ್ನು ಮುಂದೆ ವಿದ್ಯಾಭ್ಯಾಸ ಕಡೆ ಗಮನಹರಿಸಬೇಕು. ಮುಂದೆ ಪರೀಕ್ಷೆಯ ಪರ್ವಕಾಲ ಆರಂಭವಾಗುತ್ತಿದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕು. ನಿಮ್ಮ ಭವಿಷ್ಯದ ರೂವಾರಿಗಳು ನೀವೇ ಆಗಿರುವುದರಿಂದ ಇಷ್ಟಪಟ್ಟು ಓದಿ ಯಶಸ್ಸು ಸಾಧಿಸಿ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರೇಗೌಡ ಅಧ್ಯಕ್ಷತೆವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ಸಮಾರಂಭವನ್ನು ಉದ್ಘಾಟಿಸಿದರು. ಸಾಂಸ್ಕøತಿಕ, ಕ್ರೀಡಾ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಪುಸ್ತಕ ಬಹುಮಾನವನ್ನು ವಿತರಿಸಲಾಯಿತು.
ಅತಿಥಿ ಉಪನ್ಯಾಸಕರಾದ ಶಾಲಿನಿ ಮತ್ತು ನಂದೀಶ್ ಅವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಹಿರಿಯ ಉಪನ್ಯಾಸಕ ಎಚ್.ಪುಟ್ಟಸ್ವಾಮಿ, ಸಾಂಸ್ಕøತಿಕ ಕಾರ್ಯದರ್ಶಿ ಹೊಳಲು ಶ್ರೀಧರ್, ಕ್ರೀಡಾ ಕಾರ್ಯದರ್ಶಿ ವಿಶ್ವನಾಥ್, ಉಪನ್ಯಾಸಕರಾದ ವಿ.ಎಂ.ರವಿ, ವೈ.ಸುರೇಶ, ಬಿ.ಮಂಜುನಾಥ್, ಕೆ.ಆರ್.ರೂಪಶ್ರೀ, ಚೇತನಾ, ಬಿ.ಜಿ.ಲತಾ ಉಪಸ್ಥಿತರಿದ್ದರು.