ಕಾಶ್ಮೀರದ ಭಯೋತ್ಪಾದನೆ ನಿಗ್ರಹಿಸುವಲ್ಲಿ ಮೋದಿಯ ತೋಳ್ಬಲ, ಸೈನಿಕ ಪ್ರವೃತ್ತಿ ವಿಫಲ: ಚಿದಂಬರಂ
ಹೊಸದಿಲ್ಲಿ, ಜ. 7: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಅಂತ್ಯಗೊಳಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ತೋಳ್ಬಲ ಹಾಗೂ ಸೈನಿಕ ಪ್ರವೃತ್ತಿ ವಿಫಲವಾಗಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ನಾಗರಿಕರು ಹಾಗೂ ಭಯೋತ್ಪಾದಕರ ಹತ್ಯೆಯ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, ಕಾಶ್ಮೀರದಲ್ಲಿ ನಾಗರಿಕರು ಹಾಗೂ ಉಗ್ರರ ಹತ್ಯೆ 2014ರಲ್ಲಿ 28-57 ಇದ್ದುದು 2017ರಲ್ಲಿ 110ರಿ-128ಕ್ಕೆ ಏರಿತು. ಅಂದರೆ ಸರಿಸುಮಾರು ದ್ವಿಗುಣಗೊಂಡಿತು ಎಂದಿದ್ದಾರೆ. ತೋಳ್ಬಲ ಹಾಗೂ ಸೈನಿಕ ಪ್ರವೃತ್ತಿಯ ಕ್ರಮದಿಂದ ಭಯೋತ್ಪಾದನೆ ಹತ್ತಿಕ್ಕಬಹುದು ಎಂದು ನಿಮ್ಮಲ್ಲಿ ಯಾರಾದರೊಬ್ಬರು ಭಾವಿಸಿದಲ್ಲಿ ಅದನ್ನು ಬದಲಾಯಿಸಲು ನಾವು ಒಂದು ಅವಕಾಶ ನೀಡುತ್ತೇವೆ ಎಂದು ಚಿದಂಬರಂ ಹೇಳಿದ್ದಾರೆ. ಕಾಶ್ಮೀರ ಸಮಸ್ಯೆ ಬಗೆಹರಿಸುವಲ್ಲಿ ಶ್ರದ್ಧಾಪೂರ್ವಕವಾಗಿ ಶ್ರಮಿಸಿದವರಲ್ಲಿ ನಾವು ಎ.ಬಿ. ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಚಿದಂಬರಂ ಹೇಳಿದ್ದಾರೆ.