ದ್ವೇಷ ಬಿತ್ತುವ ಸಂಘಟನೆಗಳಿಗೆ ಕಡಿವಾಣ ಹಾಕಿ,
ಮಾನ್ಯರೇ,
ಹತ್ತು ವರ್ಷಗಳ ಹಿಂದೆ ಕರ್ನಾಟಕ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದ ನಾಡು ಎಂದೇ ಹೆಸರು ವಾಸಿಯಾಗಿತ್ತು. ಆದರೆ ಇತ್ತೀಚೆಗೆ ಕರ್ನಾಟಕ ರಾಜ್ಯ ಕೋಮು ಘರ್ಷಣೆಗಳ ತಾಣವಾಗಿ ಹೊರ ಹೊಮ್ಮುತ್ತಿದೆ. ಇದು ಅತ್ಯಂತ ನೋವಿನ ಸಂಗತಿ. ಅದರಲ್ಲೂ ಕರಾವಳಿ ಪ್ರದೇಶಗಳಲ್ಲಿ ಕೆಲವು ಧರ್ಮಾಂಧರಿಂದ ಮತ್ತು ಕೋಮು ಸಂಘಟನೆಗಳಿಂದ ಜಾತಿ ಸಂಘರ್ಷ ಮತ್ತು ಕೊಲೆಗಳಂತಹ ದುಷ್ಕೃತ್ಯಗಳು ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಹಿಂಸಾಚಾರ ಮತ್ತು ಅಶಾಂತಿಯ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕರು ಭಯದಿಂದ ಜೀವನ ಸಾಗಿಸುವಂತಾಗಿದೆ. ಅಲ್ಲದೆ ಕೆಲವೊಮ್ಮೆ ಕೋಮು ಗಲಭೆಗಳು ವಿಕೋಪಕ್ಕೆ ತಿರುಗಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಗಾಗಿ ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ. ಜೊತೆಗೆ ಜನರ ಮಧ್ಯ ಇದ್ದ ಏಕತೆ ಮತ್ತು ಭಾವೈಕ್ಯ ಸಂಪೂರ್ಣ ಮಾಯವಾಗಿದೆ.
ಈ ಕೋಮು ಗಲಭೆಗಳಿಂದ ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದ್ದಾಗ ರಾಜಕೀಯ ಪಕ್ಷಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿವೆ. ಮತ್ತೊಂದೆಡೆ ಜನರ ಸಾವಿನಲ್ಲಿ ರಾಜಕೀಯ ಮಾಡುತ್ತಿವೆ. ಧರ್ಮ ರಕ್ಷಣೆ ಮಾಡಬೇಕಾದ ಕೋಮು ಸಂಘಟನೆಗಳು ಪರಸ್ಪರ ಜಾತಿ ನಿಂದನೆಯಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವುದರ ಮೂಲಕ ಜನರ ನೆಮ್ಮದಿ ಹಾಳು ಮಾಡುತ್ತಿವೆ. ಆದ್ದರಿಂದ ಸಮಾಜದ ಹಿತ ದೃಷ್ಟಿಯಿಂದ ಜನರಲ್ಲಿ ದ್ವೇಷ ಹುಟ್ಟಿಸುವ ಯಾವುದೇ ಧರ್ಮಕ್ಕೆ ಸೇರಿದ ಸಂಘಟನೆಗಳಾಗಲಿ ಅವುಗಳನ್ನು ನಿಷೇಧಿಸಿ ಅವುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಹದಗೆಟ್ಟಿರುವ ಸಮಾಜವನ್ನು ಸರಿಪಡಿಸಲು ಮತ್ತು ಶಾಂತಿ ಮತ್ತು ಸೌಹಾರ್ದ ಸಭೆಗಳನ್ನು ಹಮ್ಮಿಕೊಂಡು ಜನರಲ್ಲಿ ಏಕತೆ ಮತ್ತು ಭಾವೈಕ್ಯ ಮೂಡಿಸಬೇಕಿದೆ.