ಸಾಗರ ನಗರಸಭೆ ಆಯುಕ್ತರ ಶಿವಮೊಗ್ಗದ ಮನೆಯಲ್ಲಿ ಕಳ್ಳರ ಕೈಚಳಕ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಕಳವು
![ಸಾಗರ ನಗರಸಭೆ ಆಯುಕ್ತರ ಶಿವಮೊಗ್ಗದ ಮನೆಯಲ್ಲಿ ಕಳ್ಳರ ಕೈಚಳಕ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಕಳವು ಸಾಗರ ನಗರಸಭೆ ಆಯುಕ್ತರ ಶಿವಮೊಗ್ಗದ ಮನೆಯಲ್ಲಿ ಕಳ್ಳರ ಕೈಚಳಕ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಕಳವು](https://www.varthabharati.in/sites/default/files/images/articles/2018/01/8/1_1.jpg)
ಶಿವಮೊಗ್ಗ, ಜ. 8: ನಗರಸಭೆ ಆಯುಕ್ತರ ಮನೆಯಲ್ಲಿ ಕಳ್ಳರ ತಂಡವೊಂದು ತನ್ನ ಕೈಚಳಕ ತೋರಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಅಪಹರಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಾಗರ ನಗರಸಭೆಯಲ್ಲಿ ಆಯುಕ್ತರಾಗಿರುವ ರಾಜುರವರಿಗೆ ಸೇರಿದ ವಿನೋಬನಗರದ ಆಟೋ ಕಾಂಪ್ಲೆಕ್ಸ್ ಬಳಿಯಿರುವ ಸಿದ್ದೇಶ್ವರ ನಿಲಯದಲ್ಲಿ ಈ ಕೃತ್ಯ ನಡೆದಿದೆ. ಈ ಕುರಿತಂತೆ ಜ. 7 ರಂದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸುದರ್ಶನ್, ಇನ್ಸ್ಪೆಕ್ಟರ್ ಹರೀಶ್ ಪಾಟೀಲ್, ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆಯವರು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಮಾಹಿತಿ ಕಲೆ ಹಾಕಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಘಟನೆ ಹಿನ್ನೆಲೆ: ಕರ್ತವ್ಯದ ನಿಮಿತ್ತ ಜ. 1 ರಂದು ರಾಜುರವರು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಸಾಗರಕ್ಕೆ ತೆರಳಿದ್ದರು. ಜ. 5 ರಂದು ಅವರ ಮನೆಯಲ್ಲಿ ಬಾಡಿಗೆಗಿರುವ ಸುಂದರೇಶ್ ಎಂಬುವರು ರಾಜುರವರಿಗೆ ಕರೆ ಮಾಡಿ, ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ರಾಜುರವರು ಶಿವಮೊಗ್ಗದ ಮನೆಗೆ ಆಗಮಿಸಿದ್ದಾರೆ.
ಪರಿಶೀಲಿಸಿದಾಗ ಮನೆಯ ಮುಂಬದಿಯ ಕಬ್ಬಿಣ ಹಾಗೂ ಮರದ ಬಾಗಿಲುಗಳನ್ನು ಆಯುಧವೊಂದರಿಂದ ಮುರಿದು ಕಳ್ಳರು ಒಳ ಪ್ರವೇಶಿಸಿದ್ದು ಬೆಳಕಿಗೆ ಬಂದಿದೆ. ಹಾಲ್ನಲ್ಲಿದ್ದ 20 ಸಾವಿರ ರೂ. ಮೌಲ್ಯದ ಎಲ್ಇಡಿ ಟಿ.ವಿ. - ಆ್ಯಂಪ್ಲಿಪ್ಲೇಯರ್, 12 ಸಾವಿರದ ಬಂಗಾರದ ಓಲೆ, 2800 ರೂ. ಮೌಲ್ಯದ ಬೆಳ್ಳಿಯ ಕುಂಕುಮದ ಬಟ್ಟಲು, 3000 ರೂ. ಮೌಲ್ಯದ ದೇವರ ಮುಖ, 2600 ರೂ. ಮೌಲ್ಯದ ಒಂದು ಜೊತೆ ಬೆಳ್ಳಿ ದೀಪ, ಅಲ್ಮೇರಾದಲ್ಲಿದ್ದ 13,000 ರೂ. ಮೌಲ್ಯದ ಎರಡು ಬಂಗಾರದ ಉಂಗುರ, 5600 ರೂ. ಮೌಲ್ಯದ ಬಂಗಾರದ ಡಾಲರ್, 5000 ರೂ. ಮೌಲ್ಯದ ಮುತ್ತಿನ ಕಿವಿ ಜಾಲರಿ, 8000 ರೂ. ಮೌಲ್ಯದ ಬೆಳ್ಳಿಯ ಕಾಲು ಚೈನು,
ಮೂರು ಜೊತೆ ಬೆಳ್ಳಿಯ ಕಾಲುಂಗರದ ಜೊತೆಗೆ 1.20 ಲಕ್ಷ ನಗದನ್ನು ಕಳ್ಳರು ಅಪಹರಿಸಿರುವುದು ಕಂಡುಬಂದಿದೆ. ಕಳವು ಮಾಡಲಾಗಿರುವ ನಗನಾಣ್ಯದ ಒಟ್ಟಾರೆ ಮೌಲ್ಯ 1,93,800 ರೂ.ಗಳೆಂದು ಅಂದಾಜಿಸಲಾಗಿದೆ. ಕರ್ತವ್ಯದ ಒತ್ತಡದ ಕಾರಣದಿಂದ ರಾಜುರವರು ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.