ವ್ಯಸನಮುಕ್ತ ಕೇಂದ್ರದಲ್ಲಿಯೇ ಆತ್ಮಹತ್ಯೆಗೆ ಶರಣಾದ ಮದ್ಯ ವ್ಯಸನಿ
![ವ್ಯಸನಮುಕ್ತ ಕೇಂದ್ರದಲ್ಲಿಯೇ ಆತ್ಮಹತ್ಯೆಗೆ ಶರಣಾದ ಮದ್ಯ ವ್ಯಸನಿ ವ್ಯಸನಮುಕ್ತ ಕೇಂದ್ರದಲ್ಲಿಯೇ ಆತ್ಮಹತ್ಯೆಗೆ ಶರಣಾದ ಮದ್ಯ ವ್ಯಸನಿ](https://www.varthabharati.in/sites/default/files/images/articles/2018/01/8/suicide.jpg)
ಶಿವಮೊಗ್ಗ, ಜ. 8: ಮದ್ಯ ವ್ಯಸನಮುಕ್ತ ಕೇಂದ್ರದಲ್ಲಿ ತಂಗಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ತಾಲೂಕಿನ ಕೊಮ್ಮನಾಳು ಗ್ರಾಮದ ನಿವಾಸಿಯಾದ ಅಶೋಕ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೋಮಿನಕೊಪ್ಪದಲ್ಲಿರುವ ಸುರಭಿ ವ್ಯಸನ ಮುಕ್ತ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕರವರು ಇತ್ತೀಚೆಗೆ ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಈ ಹಿಂದೆ ಮನೆಯಲ್ಲಿ ಆತ್ಮಹತ್ಯೆಗೆ ವಿಫಲ ಯತ್ನ ಕೂಡ ನಡೆಸಿದ್ದರು. ಮದ್ಯ ಸೇವನೆ ಚಟದಿಂದ ಮುಕ್ತಗೊಳಿಸಲು ನಗರದ ಸೋಮಿನಕೊಪ್ಪದಲ್ಲಿರುವ ಸುರಭಿ ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ಇವರನ್ನು ಇತ್ತೀಚೆಗೆ ಕುಟುಂಬದವರು ದಾಖಲಿಸಿದ್ದರು.
ಎಲ್ಲರೂ ಮಲಗಿದ್ದ ವೇಳೆ ಕೇಂದ್ರದ ಸ್ನಾನದ ಕೊಠಡಿಯಲ್ಲಿ ನೈಲಾನ್ ಹಗ್ಗವೊಂದರಿಂದ ಅಶೋಕ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇಂದ್ರದ ಸಿಬ್ಬಂದಿ ಸ್ನಾನದ ಕೊಠಡಿಗೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ ಎಂದು ತಿಳಿದುಬಂದಿದೆ.