ಕಯ್ಯರು ಕ್ರಿಸ್ತರಾಜ ದೇವಾಲಯದ ವಾರ್ಷಿಕೋತ್ಸವ: ಭಾವೈಕ್ಯದ ರವಿವಾರ

ಕಾಸರಗೋಡು, ಜ. 8: ಕಯ್ಯರು ಕ್ರಿಸ್ತರಾಜ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಭಾವೈಕ್ಯದ ರವಿವಾರ ಆಚರಿಸಲಾಯಿತು. ಇದರ ಅಂಗವಾಗಿ ರವಿವಾರ ಪರಮಪ್ರಸಾದದ ಮೆರವಣಿಗೆ ನಡೆಯಿತು.
ಉಜಿರೆ ದಯಾಳ್ಬಾಗ್ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ವಂ. ಫಾ. ವಿನೋದ್ ಮಸ್ಕರೇನಸ್ ದಿವ್ಯ ಬಲಿಪೂಜೆ ನೆರವೇರಿಸಿದರು. ಬಲಿಪೂಜೆ ಬಳಿಕ ದೇವಾಲಯದಿಂದ ಕಯ್ಯೆರು ಜಂಕ್ಷನ್ ವರೆಗೆ ಪರಮಪ್ರಸಾದ ಮೆರವಣಿಗೆ ನಡೆಯಿತು. ಜಂಕ್ಷನ್ನಲ್ಲಿರುವ ವೆಲಂಕಣಿ ಮಾತೆಯ ಪ್ರತಿಮೆಯ ಬಳಿ ಕಯ್ಯೆರು ದೇವಾಲಯದ ಧರ್ಮಗುರು ವಂ. ಫಾ. ವಿಕ್ಟರ್ ಡಿಸೋಜ ಪ್ರಾರ್ಥನೆ ನೆರವೇರಿಸಿದರು. ಬಳಿಕ ಕ್ರಿಸ್ತರಾಜ ದೇವಾಲಯಕ್ಕೆ ಆಗಮಿಸಿ ಪರಪಮಪ್ರಸಾದದ ಆಶೀರ್ವಾದ ನಡೆಯಿತು.
ಬೇಳ ಸೈಂಟ್ ಮೇರಿಸ್ ಕಾಲೇಜಿನ ಪ್ರಾಧ್ಯಾಪಕ ವಂ. ಫಾ. ಪೌಲ್ ಕ್ರಾಸ್ತ ವಿಧಿವಿಧಾನ ನೆರವೇರಿಸಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕೋತ್ಸವ ಜ. 10ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 9.45ಕ್ಕೆ ಪವಿತ್ರ ಮೋಂಬತ್ತಿ ವಿತರಣೆ ನಡೆಯಲಿದೆ. 10. 15ಕ್ಕೆ ದಿವ್ಯಬಲಿಪೂಜೆ ಜರಗಲಿದೆ. ಕಾಸರಗೋಡು ಧರ್ಮವಲಯ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಳ್ಳುವರು.





