ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಧರಣಿ
ಬೆಂಗಳೂರು, ಜ.8: ಅಂಬೇಡ್ಕರ್ ಭವನ, ವಸತಿ-ನಿವೇಶನ, ಸ್ಮಶಾನಗಳಿಗೆ ಭೂಮಿ ಕಾಯ್ದಿರಿಸುವಂತೆ ಆಗ್ರಹಿಸಿ ಹಾಗೂ ಹೋರಾಟಗಾರರ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ವತಿಯಿಂದ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿತ್ತು.
ನಗರದ ಬನ್ನಪ್ಪ ಪಾರ್ಕ್ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ಮೂಲಭೂತ ಸೌಲಭ್ಯಗಳು ಕಲ್ಪಿಸುವಲ್ಲಿ ವಿಫಲವಾದ ಸರಕಾರದ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ, ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಹೀಗಿರುವಾಗ, ಸಾಮಾನ್ಯ ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇಂದಿಗೂ ದಲಿತರು ಶಿಕ್ಷಣ, ಆರೋಗ್ಯ, ವಸತಿ, ರಕ್ಷಣೆಯಿಂದ ವಂಚಿತರಾಗಿದ್ದಾರೆ. ದೌರ್ಜನ್ಯ, ದಬ್ಬಾಳಿಕೆ, ಸಾಮಾಜಿಕ ಅವಮಾನಗಳಿಂದ ಬಳಲುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸರಕಾರ ವಶಪಡಿಸಿಕೊಂಡಿದೆ. ಇನ್ನೂ ಅನೇಕ ತಾಲೂಕುಗಳಲ್ಲಿ ಬಲಾಢ್ಯರು ಅಕ್ರಮವಾಗಿ ಸರಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದು, ಸರಕಾರ ಇವರ ಮೇಲೆ ಕೂಡಲೇ ಕ್ರಮ ಕೈಗೊಂಡು ಭೂಮಿ ವಶಕ್ಕೆ ಪಡೆಯಬೇಕು. ಅದನ್ನು ಅಂಬೇಡ್ಕರ್ ಭವನ, ಆಸ್ಪತ್ರೆ, ಶಾಲೆ, ನಿವೇಶನಗಳನ್ನು ನಿರ್ಮಿಸಲು ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರ ಮೇಲೆ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಕೂಡಲೇ ಸರಕಾರ ಹಿಂಪಡೆಯಬೇಕು. ದಕ್ಷಿಣ ಮತ್ತು ಉತ್ತರ ಉಪ ವಿಭಾಗಾಧಿಕಾರಿಗಳು ನ್ಯಾಯಾಲಯದಲ್ಲಿ ಮಾಡುತ್ತಿರುವ ಆದೇಶಗಳನ್ನು ಕನ್ನಡದಲ್ಲಿ ಮಾಡಬೇಕು. ಜಿಲ್ಲಾಧಿಕಾರಿಗಳು ನ್ಯಾಯಾಲಯದಲ್ಲಿ ದಾಖಲಿಸಿರುವ ಎಸ್ಸಿ, ಎಸ್ಟಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು. ಅಕ್ರಮ-ಸಕ್ರಮದಡಿಯಲ್ಲಿ ಸಲ್ಲಿಸಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಮುಖಂಡ ಕೊಪ್ಪ ರಾಮಾಂಜನೇಯ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಅಂಜನಾಪುರ ಗ್ರಾಮದ ಬಳಿ ತ್ಯಾಜ್ಯವನ್ನು ಸುರಿಯುವುದನ್ನು ನಿಲ್ಲಿಸಬೇಕು. ಹರಿನಗರ ಗ್ರಾಮದಲ್ಲಿ ವಾಸವಾಗಿರುವ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ವಸತಿ ಹಂಚಿಕೆ ಮಾಡಬೇಕು. ವೀವರ್ಸ್ ಕಾಲನಿಯಲ್ಲಿ ಸ್ಮಶಾನ, ಹೆರಿಗೆ ಆಸ್ಪತ್ರೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಜಮೀನು ನೀಡಬೇಕು. ಮಾರನಾಯಕನಹಳ್ಳಿ ಬಳಿ ಆಕ್ರಮಿಸಿಕೊಂಡಿರುವ ಸಾರ್ವಜನಿಕ ಭೂಮಿ ಹಾಗೂ ಸ್ಮಶಾನ ಭೂಮಿಯನ್ನು ಬಿಡಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಮುಖಂಡರಾದ ರವಿ, ಜಿ.ರಗ್ಗೇಶ್, ಕೃಷ್ಣಪ್ಪ, ಸಿದ್ಧರಾಮಯ್ಯ, ಪಿ.ಎಂ.ಮಲ್ಲಿಕಾರ್ಜುನ ಸ್ವಾಮಿ, ಮುದ್ದುರಾಜ್, ಎ.ಮಂಜುನಾಥ್, ಶಿರವಾರ ನರಸಿಂಹಮೂರ್ತಿ, ಮುನಿದಾಸಪ್ಪ, ಸಿದ್ದಯ್ಯ, ಮುನಿರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







