ಕೃಷಿ ವಲಯದ ಸಮಗ್ರ ಪ್ರಗತಿ ಕೇಂದ್ರ ಸರಕಾರದ ಗುರಿ: ಸಚಿವ ಡಿ.ವಿ ಸದಾನಂದ ಗೌಡ

ಕಾಸರಗೋಡು, ಜ. 8: ಕೃಷಿ ವಲಯದ ಸಮಗ್ರವಾದ ಪ್ರಗತಿ ಕೇಂದ್ರ ಸರಕಾರದ ಗುರಿಯಾಗಿದೆ. ಈ ಹಿನ್ನಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಪ್ರೋತ್ಸಾಹ ನೀಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
ಅವರು ಸೋಮವಾರ ಕಾಸರಗೋಡು ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರ (ಸಿಪಿಸಿಆರ್ ಐ ) ನಲ್ಲಿ ಕಿಸಾನ್ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರಾವಳಿಯ ಪ್ರಮುಖ ಬೆಳೆಯಾದ ಅಡಿಕೆ, ತೆಂಗು, ಕಾಳುಮೆಣಸು ಹಾಗೂ ಇತರ ನಾಣ್ಯ ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಘೋಷಿಸಿದೆ. ಬೆಲೆ ಇಳಿಕೆಯಾಗದಂತೆ ಕ್ರಮ ತೆಗೆದುಕೊಂಡಿದ್ದು, ಕೃಷಿಕರಿಗೆ ಉತ್ತೇಜನ ನೀಡುವ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುವ ಅಗತ್ಯ ಎಂದು ಹೇಳಿದರು.
ಸಂಸದ ಪಿ .ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಸಿಆರ್ ಐ ನ ನೂರನೇ ವರ್ಷಾಚರಣೆ ಹಿನ್ನಲೆಯಲ್ಲಿ ಅಂಚೆ ಚೀಟಿಯನ್ನು ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಅಂಚೆ ಇಲಾಖೆಯ ಕೋಜಿಕ್ಕೋಡ್ ವಲಯ ಮುಖ್ಯಸ್ಥ ಎಸ್. ಎಫ್ . ಎಚ್ ರಿಜ್ವಿ ಬಿಡುಗಡೆಗೊಳಿಸಿದರು .
ಬೆಳೆಗಳ ಮಾಹಿತಿ ಕುರಿತ ಐದು ಪುಸ್ತಕ ಹಾಗೂ ಸಿಪಿಸಿಆರ್ ಐ ನ ನೂತನ ಉತ್ಪನ್ನಗಳನ್ನು ಕೇಂದ್ರ ಸಚಿವರು ಬಿಡುಗಡೆ ಗೊಳಿಸಿದರು. ಉತ್ತಮ ಕೃಷಿಕರಾದ ಸಿಬಿ ಜೋಸೆಫ್ , ಬಂಟ್ವಾಳದ ರಾಮಕಿಶೋರ್ ಮತ್ತು ಸುಳ್ಯದ ವಿಶ್ವನಾಥರಾವ್ ರವರನ್ನು ಸಚಿವರು ಸನ್ಮಾನಿಸಿದರು.
ಶಾಸಕ ಎನ್. ಎ.ನೆಲ್ಲಿಕುನ್ನು , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ .ಸಿ ಬಶೀರ್ , ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ. ಎ. ಜಲೀಲ್ , ಐ ಸಿ ಎ ಆರ್ ನಿರ್ದೇಶಕ ಡಾ . ಎ. ಕೆ ಸಿಂಗ್ , ಸಿಪಿಸಿ ಆರ್ ಐ ನಿರ್ದೇಶಕ ಡಾ . ಪಿ ಚೌಡಪ್ಪ , ಕೃಷಿ ಅಧಿಕಾರಿ ಟಿ . ಆರ್ ಉಷಾದೇವಿ , ಡಾ . ಮನೋಜ್ ಕುಮಾರ್ , ಡಾ . ಸಿ . ತಂಬಾನ್ ಮೊದಲಾದವರು ಮಾತನಾಡಿದರು.







