ಕೋಮುವಾದಿ ಶಕ್ತಿಗಳಿಗೆ ಬೆಂಬಲ ನೀಡಬೇಡಿ: ಮೂಳೂರು ಅಲ್ ಇಹ್ಸಾನ್ನಲ್ಲಿ ಸಿಎಂ ಸಿದ್ದರಾಮಯ್ಯ
ಮೂಳೂರು, ಜ. 8: ಕೆಲವು ಶಕ್ತಿಗಳು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸುತ್ತವೆ. ಆ ಮೂಲಕ ಕೋಮು ಗಲಭೆಗಳನ್ನು ಮಾಡಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ. ಇಂತಹ ಶಕ್ತಿಗಳನ್ನು ಸಮಾಜ ಯಾವತ್ತೂ ಬೆಂಬಲಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನ ಸಂಸ್ಥೆಯಾದ ಮೂಳೂರಿನ ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿದರು.
ದೇಶವು ಜಾತ್ಯಾತೀತವಾಗಿದೆ. ಇನ್ನೊಬ್ಬರನ್ನು ಪ್ರೀತಿಸುವುದು ಗೌರವಿಸಬೇಕು. ಇನ್ನೊಂದು ಧರ್ಮವನ್ನು ಧ್ವೇಷಿಸಲು ಹೇಳುವುದು ಅದು ಕೋಮುವಾದ. ಇತ್ತೀಚಿನ ದಿನಗಳಲ್ಲಿ ಕೋಮುವಾದ ತಲೆ ಎತ್ತುತ್ತಿದೆ. ಕೋಮುವಾದದ ಮೂಲಕ ಅಶಾಂತಿ ಉಂಟು ಮಾಡಿ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವುದನ್ನು ಖಂಡಿಸಬೇಕು. ರಾಜಕೀಯ ಪಕ್ಷಗಳೂ ಜಾತ್ಯಾತೀತತೆಗೆ ಬದ್ಧವಾಗಿರಬೇಕು. ಯಾವ ಪಕ್ಷ ಜಾತ್ಯಾತೀತತೆಗೆ ಬದ್ಧವಾಗುವುದಿಲ್ಲ ಆ ಪಕ್ಷ ಸಂವಿಧಾನ ವಿರೋಧಿ ಎಂದು ಹೇಳಿದರು.
ಶಿಕ್ಷಣ ಪ್ರತಿಯೋರ್ವರ ಹಕ್ಕು. ಪ್ರತಿಯೋರ್ವರೂ ಶಿಕ್ಷಣ ಪಡೆಯುವ ಮೂಲಕ ವ್ಯಕ್ತಿತ್ವ ವಿಕಸನವಾಗುತ್ತದೆ. ಅಲ್ಲದೆ ಸ್ವಾಭಿಮಾನಿಯಾಗಿ ಬದುಲು ಸಾಧ್ಯ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಇದರಿಂದ ಮಕ್ಕಳು ಸಮಾಜಕ್ಕೆ, ದೇಶಕ್ಕೆ ದೊಡ್ಡ ಆಸ್ತಿಯಾಗುತ್ತಾರೆ. ಸುನ್ನೀ ಸೆಂಟರ್ನಲ್ಲಿ ದುರ್ಬಲ ವರ್ಗದವರಿಗೆ ಶಿಕ್ಷಣ ನೀಡುತ್ತಿರುವು ಶ್ಲಾಘನೀಯ ಎಂದ ಅವರು, ಸಂಸ್ಥೆಗೆ ಈಗಾಗಲೇ ಅನುದಾನ ನೀಡಲಾಗಿದೆ. ಇನ್ನಷ್ಟು ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದ.ಕ. ಸುನ್ನೀ ಸೆಂಟರ್ ಅಧ್ಯಕ್ಷ ಅಸೈಯ್ಯದ್ ಕೆ.ಎಸ್.ಆಟಕೋಯ ಕುಂಬೋಳ್ ತಂಙಳ್ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಶಾಸಕರಾದ ವಿನಯಕುಮಾರ್ ಸೊರಕೆ ಪ್ರಸ್ತಾವಿಕವಾಗಿ ಮಾತನಾಡಿದರು.
ಸಚಿವರಾದ ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಶಾಸಕ ಮೊಯ್ದಿನ್ ಬಾವ, ಕಾಂಗ್ರೆಸ್ ಮುಖಂಡ ಜಿ.ಎ.ಬಾವ, ಮಮ್ತಾಝ್ ಆಲಿ, ದ.ಕ. ಸುನ್ನೀ ಸೆಂಟರ್ ಇಸ್ಮಾಯಿಲ್ ಹಾಜಿ ಕಿನ್ಯ, ಬದ್ರುದ್ದೀನ್ ಬಜಪೆ, ಎಂ.ಎಚ್.ಬಿ. ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ ಸ್ವಾಗತಿಸಿದರು. ಹಬೀಬುರಹ್ಮಾನ್ ವಂದಿಸಿದರು. ರಕೀಬ್ ಕನ್ನಂಗಾರ್, ಖಲಂದರ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬಶೀರ್ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಂದನೆ ಸ್ವೀಕರಿಸಿದರು.