ಸಿದ್ದರಾಮಯ್ಯ ಬಗ್ಗೆ ರಾಹುಲ್ ಗಾಂಧಿ ಬಹರೈನ್ ನಲ್ಲಿ ಹೇಳಿದ್ದೇನು ?
ಸಾಧನಾ ಯಾತ್ರೆಯಲ್ಲಿರುವ ಸಿಎಂ ಗೆ ರಾಹುಲ್ ಟಾನಿಕ್
ಬಹರೈನ್,ಜ.9: ಬಹರೈನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆಯೂ ಮಾತನಾಡಿದ್ದಾರೆ. ಸದ್ಯ ಸಾಧನಾ ಯಾತ್ರೆಯಲ್ಲಿರುವ ಮುಖ್ಯಮಂತ್ರಿಗೆ ರಾಹುಲ್ ಹೇಳಿಕೆ ಮತ್ತಷ್ಟು ಹುಮ್ಮಸ್ಸು ನೀಡುವುದೆಂದೇ ಅಂದಾಜಿಸಲಾಗಿದೆ.
ಗುಜರಾತ್ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ ರಾಹುಲ್ ತಮ್ಮ ಪಕ್ಷ ಬಿಜೆಪಿಯ ಭದ್ರಕೋಟೆಯಲ್ಲಿ ಉತ್ತಮ ನಿರ್ವಹಣೆ ತೋರಿದೆಯೆಂದು ಹೇಳಿದರಲ್ಲದೆ ಪಕ್ಷವು ಈ ವರ್ಷ ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ಗೆಲುವು ಸಾಧಿಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
"ಅಲ್ಲಿ ನಮಗೆ ಒಬ್ಬ ಪ್ರಬಲ ನಾಯಕರಿದ್ದಾರೆ ಹಾಗೂ ನಾವು ಅಲ್ಲಿ ಜಯ ಸಾಧಿಸುತ್ತೇವೆ,'' ಎಂದು ರಾಹುಲ್ ಹೇಳಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭಾರೀ ಖುಷಿ ನೀಡುವುದು ಖಂಡಿತ. ರಾಹುಲ್ ಗಾಂಧಿ ಬಹರೈನ್ ನಲ್ಲಿ ಪ್ರಬಲ ನಾಯಕ ಎಂದು ಬಣ್ಣಿಸಿರುವುದು ಸಿದ್ದರಾಮಯ್ಯನವರನ್ನು ಎಂಬುದು ಸ್ಪಷ್ಟ.
ಕರ್ನಾಟಕದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಅವರ ಈ ಹೇಳಿಕೆ ಪಕ್ಷದ ನಾಯಕರಲ್ಲಿ ಹಾಗೂ ಕಾರ್ಯಕರ್ತರ ಆತ್ಮಸೈರ್ಯ ಹೆಚ್ಚಿಸಲಿದೆ.