ಹೆಬ್ಬೆಯಿಂದ ಮದಗದ ಕೆರೆಗೆ ನೀರು ತರುವ ಯೋಜನೆಗೆ ಮುಖ್ಯಮಂತ್ರಿಗಳಿಗೆ ಮನವಿ: ಕೆ.ಎಸ್.ಆನಂದ್
ಕಡೂರು, ಜ.9: ಹಲವು ವರ್ಷಗಳಿಂದ ಹೆಬ್ಬೆ ಜಲಪಾತ ಯೋಜನೆಯಿಂದ ಮದಗದ ಕೆರೆಗೆ ನೀರು ತರಲು ಪ್ರಯತ್ನಗಳು ನಡೆಯುತ್ತಿವೆ. ಯೋಜನೆ ಕಾರ್ಯಗತವಾದರೆ ತಾಲೂಕಿನ ಹಲವಾರು ಕೆರೆಗಳು ತುಂಬಲಿದ್ದು, ಈ ಯೋಜನೆಯನ್ನು ಈ ಬಾರಿಯ ಆಯವ್ಯಯದಲ್ಲಿ ಸೇರಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ್ ತಿಳಿಸಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಬರಗಾಲಕ್ಕೆ ತುತ್ತಾಗಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಮುಖ್ಯಮಂತ್ರಿಗಳು ಕಡೂರು ಪಟ್ಟಣಕ್ಕೆ ನವಕರ್ನಾಟಕ ನಿರ್ಮಾಣ ಕಲ್ಪನೆಯಲ್ಲಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಕಡೂರು ಬರಗಾಲಕ್ಕೆ ತುತ್ತಾಗಿರುವ ಬಗ್ಗೆ ಹಾಗೂ ಶಾಶ್ವತ ನೀರಾವರಿ ಬಗ್ಗೆ ಮನವಿಯಲ್ಲಿ ತಿಳಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರಾದ ಬಿ.ಎಲ್. ಶಂಕರ್ರವರು ಚಿಕ್ಕಮಗಳೂರು ಜಿಲ್ಲೆ ಪರವಾಗಿ ಭಾರಿ ನೀರಾವರಿ ಮಂತ್ರಿಗಳ ಬಳಿ ನಿಯೋಗ ಕರೆದೊಯ್ದು ಎಂ.ಬಿ. ಪಾಟೀಲ್ರವರಿಗೂ ಹೆಬ್ಬೆ ಜಲಪಾತ ಯೋಜನೆಯ ಬಗ್ಗೆ ಮನವಿ ನೀಡಿರುತ್ತಾರೆಂದು ಹೇಳಿದರು.
ಈ ಯೋಜನೆಯ ಬಗ್ಗೆ ವಿವರ ಪಡೆದ ಸಚಿವರಾದ ಎಂ.ಬಿ. ಪಾಟೀಲರೂ ಸಹ ಸಕಾರಾತ್ಮಕ ಭರವಸೆ ನೀಡಿರುತ್ತಾರೆ. ಎತ್ತಿನಹೊಳೆ ಯೋಜನೆಯ ಮೂಲಕ ವಿಷ್ಣುಸಮುದ್ರಕ್ಕೆ ನೀರನ್ನು ತುಂಬಿಸಿ ಕಸಬಾ, ಸಿಂಗಟಗೆರೆ, ಪಂಚನಹಳ್ಳಿ ಭಾಗಗಳ ಕೆರೆಗಳಿಗೆ ನೀರನ್ನು ನೀಡಬೇಕಿದೆ ಎಂದೂ ಸಹ ಮನವಿ ನೀಡಲಾಗಿದೆ. ಶಾಶ್ವತವಾದ ನೀರಾವರಿ ಯೋಜನೆ ಈ ಭಾಗಕ್ಕೆ ಆದಲ್ಲಿ ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ಈ ಭಾಗದ ಕೆರೆಗಳು ತುಂಬಿದರೆ ಬರಗಾಲ ಹೋಗಲಾಡಿಸಿ ಅಂತರ್ಜಲ ಹೆಚ್ಚಾಗಿ ರೈತರು ನೆಮ್ಮದಿಯ ಜೀವನ ನಡೆಸಲಿದ್ದಾರೆ. ಅಡಿಕೆ-ತೆಂಗು ತೋಟಗಳು ಉಳಿಯಲಿವೆ ಎಂದರು.
ಕಡೂರು ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಫೋಟೋ ಇಟ್ಟು ಈ ಭಾಗದ ರೈತರು ಪೂಜಿಸಲಿದ್ದಾರೆ. ಕಡೂರು ಪುರಸಭೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವುದರಿಂದ ಕಡೂರನ್ನು ನಗರಸಭೆಯನ್ನಾಗಿ ಮಾಡಬೇಕಿದೆ ಎಂದೂ ಸಹ ಮನವಿಯಲ್ಲಿ ತಿಳಿಸಲಾಗಿದೆ. ಹಿಂದಿನಿಂದಲೂ ಇರುವ ಪೌರ ಕಾರ್ಮಿಕರು ಇದ್ದಾರೆ. ಪಟ್ಟಣ ಹೆಚ್ಚಾಗಿ ಬೆಳೆದಿರುವುದರಿಂದ ಹೆಚ್ಚು ಪೌರ ಕಾರ್ಮಿಕರು ಬೇಕಿರುತ್ತದೆ. ಅನುದಾನವೂ ಸಹ ಸೀಮಿತವಾಗಿದೆ. ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ. ಕೂಡಲೇ ನಗರಸಭೆಯನ್ನಾಗಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಮ್ ಶ್ರೀನಿವಾಸ್, ವಿನಯ್, ಜಿಮ್ ರಾಜು, ಅಭಿ ಉಪಸ್ಥಿತರಿದ್ದರು.