ವಿಷ ಕುಡಿದು ಬಿಜೆಪಿ ಕಚೇರಿಗೆ ನುಗ್ಗಿದ್ದ ಉದ್ಯಮಿ ಮೃತ್ಯು
ನೋಟ್ ಬ್ಯಾನ್ ಜಿಎಸ್ಟಿಯಿಂದ ಭಾರೀ ನಷ್ಟ ಆರೋಪ
ಹೊಸದಿಲ್ಲಿ, ಜ.9: ನೋಟ್ ಬ್ಯಾನ್ ಮತ್ತು ಜಿಎಸ್ ಟಿಯಿಂದ ಉದ್ಯಮದಲ್ಲಿ ಭಾರೀ ನಷ್ಟವಾಗಿದೆ ಎಂದು ಆರೋಪಿಸಿ ವಿಷ ಸೇವಿಸಿ ಬಿಜೆಪಿ ಕಚೇರಿಗೆ ನುಗ್ಗಿದ್ದ ವ್ಯಕ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹಲ್ದವಾನಿ ಮೂಲದ ಉದ್ಯಮಿ ಪ್ರಕಾಶ್ ಪಾಂಡೆ ತಾನು ವಿಷ ಸೇವಿಸುವುದಕ್ಕೆ ಮೊದಲು ಮಾಡಿದ್ದ ವಿಡಿಯೋದಲ್ಲಿ, ನೋಟ್ ಬ್ಯಾನ್ ಮತ್ತು ಜಿಎಸ್ ಟಿಯಿಂದ ತನ್ನ ಉದ್ಯಮಕ್ಕೆ ನಷ್ಟವಾಗಿದೆ ಎಂದು ಹೇಳಿದ್ದರು. ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಡೆಹ್ರಾಡೂನ್ ಬಿಜೆಪಿ ಕಚೇರಿಯಲ್ಲಿ ರಾಜ್ಯ ಕೃಷಿ ಸಚಿವ ಸುಬೋಧ್ ಉನಿಯಾಲ್ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಸಂದರ್ಭ ಪ್ರಕಾಶ್ ಪಾಂಡೆ ಕಚೇರಿಗೆ ನುಗ್ಗಿದ್ದರು.
ನಂತರ ಕಚೇರಿಯಲ್ಲಿ ಅಳುತ್ತಾ ಮಾತನಾಡಿದ ಪಾಂಡೆ, “ಜಿಎಸ್ ಟಿ ಹಾಗು ನೋಟ್ ಬ್ಯಾನ್ ನಿಂದ ಮತ್ತು ಆಡಳಿತ ವ್ಯವಸ್ಥೆಯಿಂದ ನಾನು ಬೇಸತ್ತಿದ್ದೇನೆ. ನನ್ನ ಸಾಲವನ್ನು ಸರಕಾರವೇ ಭರಿಸಬೇಕು” ಎಂದಿದ್ದರು. ನಂತರ ಅವರು ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ.