ಗೋಪಾಲಗೌಡರ ಸಹಕಾರ ಸಿಗದಿದ್ದರೆ ನಾನು ಕೂಡ ದನ, ಕುರಿ ಕಾಯುತ್ತಿದ್ದೆ : ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಜ. 9: ನಾನು ಕೂಡ ತುಳಿತಕ್ಕೊಳಗಾದ ಸಮಾಜದಿಂದ ಬಂದವನಾಗಿದ್ದೆನೆ. ಶಾಂತವೇರಿ ಗೋಪಾಲಗೌಡರು ಇಲ್ಲದಿದ್ದರೆ ನಾನು ಕೂಡ ದನ, ಕುರಿ ಕಾಯುತ್ತಿದ್ದೆ. ಇಂದಿನ ಸ್ಥಿತಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ, ತಳ ಸಮುದಾಯಗಳ ಅಧ್ಯಯನ ಕೇಂದ್ರ, ಗೋಸಂಗಿ ಸಮಾಜ ಏರ್ಪಡಿಸಿದ್ದ ಗೋಸಂಗಿ ಸಮುದಾಯದ ರಾಜ್ಯಮಟ್ಟದ ಸಂಶೋಧನಾ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳಾಗುತ್ತಾ ಬಂದರೂ ಇಲ್ಲಿಯವರೆಗೂ ಹಲವು ಹಿಂದುಳಿದ ಸಮಾಜಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ತುಳಿತಕ್ಕೊಳಗಾದವರ ಕಷ್ಟ ನಮಗೆ ಗೊತ್ತಿದೆ. ಗೋಸಂಗಿ ಸಮುದಾಯಕ್ಕೆ ಸಂಬಂಧಿಸಿದ ಅಧ್ಯಯನದ ವರದಿ ಸರ್ಕಾರಕ್ಕೆ ಕೊಟ್ಟಿಲ್ಲ. ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಮುಖ್ಯ. ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ ಅವರಲ್ಲಿ ಸಂಸ್ಕೃತಿ ಮತ್ತು ಜಾಗೃತಿಯನ್ನು ಮೂಡಿಸುವುದು ಅಗತ್ಯವಾಗಿದೆ. ಗೋಸಂಗಿ ಸಮಾಜವು ಅಲೆಮಾರಿ ವರ್ಗಕ್ಕೆ ಸೇರಿದ್ದು, ಕಂದಾಯ ಇಲಾಖೆಯಿಂದ ಸರ್ವೆ ನಡೆಸಿ, ಸೂಕ್ತ ಜಾಗವನ್ನು ವಸತಿಗಾಗಿ ನೀಡಲಾಗುವುದು. ಪ್ರತಿ ಕುಟುಂಬಕ್ಕೂ ಜಮೀನು ಕೊಡಿಸುವ ಬಗ್ಗೆ ಯತ್ನಿಸಲಾಗುವುದು. ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆಯನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ವಸತಿ ನಿಲಯ ಸ್ಥಾಪನೆಗೆ ಮುಂದಾದಲ್ಲಿ ಅದಕ್ಕೆ ನೆರವು ನೀಡಲಾಗುವುದು ಎಂದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅಧ್ಯಯನ ಕೇಂದ್ರದ ಸಂಶೋಧಕ ಪ್ರೋ. ಆರ್.ವಿ. ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಸುಮಾರು ಮೂರು ಸಾವಿರ ಗೋಸಂಗಿ ಸಮುದಾಯದವರು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಇವರ ಅಭಿವೃದ್ಧಿಗೆ ಯಾವ ಸರ್ಕಾರಗಳೂ ಗಮನ ಹರಿಸಿಲ್ಲ. ಜಾಗತಿಕರಣದಿಂದ ಈ ಸಮಾಜ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ ಎಂದರು.
ಕರ್ನಾಟಕದ 15 ಜಿಲ್ಲೆಯಲ್ಲಿ ಗೋಸಂಗಿ ಸಮುದಾಯದವರು ವಾಸವಾಗಿದ್ದಾರೆ. ಆದರೆ ಕೇವಲ ಮೂರು ಸಾವಿರ ಜನಸಂಖ್ಯೆ ಮಾತ್ರ ಇದೆ. ಸಾಮಾಜಿಕ ನ್ಯಾಯದಿಂದ ಇವರು ವಂಚಿತರಾಗಿದ್ದಾರೆ. ಜಾತಿ ಪ್ರಮಾಣ ಪತ್ರವಿಲ್ಲದೆ ಉದ್ಯೋಗ ಪಡೆಯುವುದು ಕಷ್ಟವಾಗಿದೆ. ಸರ್ಕಾರ ಈ ತಳ ಸಮುದಾಯದ ಜನರ ಬದುಕಿಗೆ ನೆರವಾಗಬೇಕು ಎಂದರು.
ವಿವಿಗಳು ಸಂಶೋಧನೆಯನ್ನು ನಡೆಸಿ ಜನರಿಗೆ ಬದುಕು ಮತ್ತು ಅಭಿವೃದ್ಧಿಯನ್ನು ಕಟ್ಟಿಕೊಡಬೇಕು. ಸಮಾಜದವರ ಜೊತೆ ಮುಖಾಮುಖಿ ನಡೆಸಿ ವಿವಿಧ ತರಬೇತಿ ಮತ್ತು ಕೌಶಲ್ಯಗಳನ್ನು ನೀಡಬೇಕು. ಪ್ರತಿಮನೆ ಮನೆಗೆ ತೆರಳಿ ಮಾಹಿತಿ ಪಡೆದು ಅವರ ಅಗತ್ಯಗಳಿಗೆ ನೆರವಾಗಬೇಕು ಎಂದು ತಿಳಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ಚಾವಡೆ ಲೋಕೇಶ್ ಮಾತನಾಡಿ, ಅಧಿಕಾರಿಗಳು ಇಲ್ಲಿಯವರೆಗೆ ತಮ್ಮ ಮನವಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಸೌಲಭ್ಯಗಳಿಂದ ವಂಚಿತರಾದ ಸಮುದಾಯ ಎಂದು ಗೊತ್ತಿದ್ದರೂ ಸಹಾ ಸಹಾಯ ಹಸ್ತನೀಡುವ ಕೆಲಸ ಮಾಡಿಲ್ಲ. ವಸತಿ, ವ್ಯಾಪಾರ, ಮಕ್ಕಳ ಶಿಕ್ಷಣ ಭೂ ಒಡೆತನ ನೀಡುವಲ್ಲಿ ಮುಂದಾಗಿಲ್ಲ ಎಂದು ವಿಷಾದಿಸಿದರು.
ಅಧ್ಯಕ್ಷತೆಯನ್ನು ಸಮಾಜದ ಮುಖಂಡ ಅಪ್ಪಾಜಿರಾವ್ ಶಿಂಧೆ ವಹಿಸಿದ್ದರು. ವೇದಿಕೆಯಲ್ಲಿ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ, ಮಲ್ಲಾಜಪ್ಪ, ರಂಗಮ್ಮ, ಭಾಸ್ಕರ ಮೊದಲಾದವರಿದ್ದರು.







