ವಿದ್ಯಾರ್ಥಿನಿಯ ಕೊಲೆ ಯತ್ನ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು
ಮಂಗಳೂರು, ಜ. 9: ವೈದ್ಯಕೀಯ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪದಲ್ಲಿ ಮಂಗಳೂರು 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮಹಾರಾಷ್ಟ್ರದ ಥಾಣಾ ಜಿಲ್ಲೆಯ ಬೈಂದರ್ ನಿವಾಸಿ ಮಿಥಿಲೇಶ್ ಕಾಮತ್ ( 35 ) ಶಿಕ್ಷೆಗೊಳಗಾದ ಅಪರಾಧಿ. ಈತ ಮಂಗಳೂರು ನಗರದ ಡೊಂಗರಕೇರಿ ಭೋಜರಾಜ್ ಲೇನ್ನ ನಿವಾಸಿ, ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ 21 ವರ್ಷದ ಯುವತಿಯನ್ನು ಮಿಥಿಲೇಶ್ ಕಾಮತ್ ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಸುಳ್ಳು ಹೇಳಿ ಪ್ರೇಮದ ನಾಟಕವಾಡಿದ್ದ. ತಾನು ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾನಿಲಯದ ಎಂಬಿಎ ಪದವೀಧರನಾಗಿದ್ದು, ಮಾಡೆಲ್ ಹಾಗೂ ಡ್ಯಾನ್ಸ್ ಕೊರಿಯೋಗ್ರಾರ್ ಆಗಿದ್ದೇನೆ ಎಂದು ಆಕೆಯನ್ನು ನಂಬಿಸಿದ್ದ. ಮಂಗಳೂರಿಗೂ ಬಂದು ಆಕೆಯ ಜತೆ ಸುತ್ತಾಡಿದ್ದ. ಆದರೆ ಕೆಲವು ಸಮಯದ ಬಳಿಕ ಆತ ಹೇಳಿರುವುದು ಸುಳ್ಳು ಎಂದು ಆಕೆಗೆ ತಿಳಿದಾಗ ಆತನ ಜತೆ ಸಂಪರ್ಕ ಕಡಿದುಕೊಂಡು ದೂರವಾಗಿದ್ದಳು. ಈ ಬಗ್ಗೆ ಆಕೆ 2014ರ ಮಾರ್ಚ್ 20 ರಂದು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ಕರೆಯಿಸಿಕೊಂಡು ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಯಿಸಿ ಕಳುಹಿಸಿದ್ದರು. 2014 ರ ಎ. 9ರಂದು ಆಕೆಯ ಮನೆಗೆ ಪ್ರವೇಶಿಸಿ ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಇದೇ ಸಂದರ್ಭದಲ್ಲಿ ಆತ ಕೂಡಾ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ವಿಚಾರಣೆ ನಡೆಸಿ ಆರೋಪಿಯ ಮೇಲಿನ ಆರೋಪಗಳು ಸಾಬೀತು ಆಗಿದ್ದರಿಂದ ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಕೊಲೆ ಯತ್ನಕ್ಕೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ, ಚಾಕುವಿನಿಂದ ಗಂಭೀರ ಸ್ವರೂಪದ ಗಾಯವುಂಟು ಮಾಡಿದ್ದಕ್ಕೆ 1ವರ್ಷ ಜೈಲು ಶಿಕ್ಷೆ ಹಾಗೂ ಆತ್ಮಹತ್ಯೆ ಯತ್ನಕ್ಕೆ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ದಂಡದಲ್ಲಿ 10,000 ರೂ. ಸರ್ಕಾರಕ್ಕೆ ಹಾಗೂ 90,000 ರೂಪಾಯಿಯನ್ನು ಸಂತ್ರಸ್ತೆ ಯುವತಿಗೆ ನೀಡಬೇಕು, ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.







